ತಮಿಳುನಾಡಿಗೆ ಕಾವೇರಿ ನೀರು: ಇಂದು ಕೆಆರ್‌ಎಸ್‌ಡ್ಯಾಂಗೆ ಮುತ್ತಿಗೆ ಹಾಕಲಿರುವ ರೈತರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತರ ಜೀವನಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಬಿಡುತ್ತಿರುವುದಕ್ಕೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಭಾಗದಲ್ಲಿ ರೈತರ ಬೆಳೆಗಳಿಗೆ ನೀರು ಸಿಗದೇ ಬೆಳೆ ಬಣಗುಟ್ಟುತ್ತಿವೆ, ಈಗಾಗಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಪ್ರತಿಭಟನೆ, ಹೆದ್ದಾರಿ ತಡೆ ಮಾಡಿದ್ದಾರೆ.

ಇದೀಗ ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ರೈತರು ಕರೆ ನೀಡಿದ್ದಾರೆ. ಹೀಗೆ ದಿನಕಳೆದರೆ ಕುಡಿಯುವ ನೀರೂ ಇಲ್ಲದಂತಾಗುತ್ತದೆ. ನಮ್ಮ ಮನೆಯಲ್ಲಿಯೇ ನೀರು ಇಲ್ಲದೇ ಇರುವಾಗ ಬೇರೆ ಕಡೆಗೆ ಇಷ್ಟೊಂದು ನೀರು ನೀಡುವುದು ಸೂಕ್ತವಲ್ಲ ಎನ್ನುವುದು ರೈತರ ವಾದವಾಗಿದೆ.

ಇಂದು ಬೃಹತ್ ಸಂಖ್ಯೆಯಲ್ಲಿ ರೈತರು ಕೆಆರ್‌ಎಸ್‌ಡ್ಯಾಂ ಮುತ್ತಿಗೆ ಹಾಕಲಿದ್ದು, ನೀರು ಬಿಡುವುದನ್ನು ನಿಲ್ಲಿಸುವಂತೆ ಪ್ರತಿಭಟಿಸಲಿದ್ದಾರೆ. ಮಳೆ ಇಲ್ಲದೆ ನಮ್ಮ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಆದರೂ ಐದು ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರುಗಳನ್ನು ಹರಿಬಿಡಲಾಗಿದೆ.

ಐದು ದಿನಗಳಲ್ಲಿ ಎರಡು ಟಿಸಿಎಂ ನೀರು ಖಾಲಿಯಾಗಿದ್ದು, ಇನ್ನೂ 10 ದಿನ ನೀರು ಬಿಟ್ಟರೆ ಐದು ಟಿಸಿಎಂಗೂ ಅಧಿಕ ನೀರು ತಮಿಳುನಾಡು ಪಾಲಾಗಲಿದೆ. ಇನ್ನು 22 ಟಿಸಿಎಂ ನೀರು ಉಳಿದಿದ್ದು, ಇದೇ ರೀತಿ ನೀರು ಬಿಟ್ಟರೆ 17 ಟಿಸಿಎಂ ನೀರು ಮಾತ್ರ ಉಳಿಯಲಿದೆ. ಇದರಲ್ಲಿ ಆರು ಟಿಸಿಎಂ ಡೆಡ್ ಸ್ಟೋರೇಜ್ ತೆಗೆದರೆ ಉಪಯೋಗಿಸಲು ಉಳಿಯುವುದು ಕೇವಲ 11 ಟಿಸಿಎಂ ಮಾತ್ರ. ಈ ನೀರು ಬೆಳೆಗಳಿಗೆ ಇರಲಿ, ಕುಡಿಯಲು ಕೂಡ ಸಾಲುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!