ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು, ಈ ಕುರಿತು ಡಿ.ಕೆ.ಶಿವಕುಮಾರ್ ಮೊದಲ ರಿಯಾಕ್ಷನ್ ನೀಡಿದ್ದಾರೆ.
ನನ್ನ ಕುಟುಂಬಕ್ಕೆ ತನಿಖಾ ಸಂಸ್ಥೆಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ತೊಂದರೆ ಕೊಡಬೇಕು ಎಂಬುದೇ ಅವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ದಿನಬೆಳಗಾದರೆ ಒಂದಿಲ್ಲೊಂದು ನೋಟೀಸ್, ದಾಳಿ, ಕೋರ್ಟ್. ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳು ದೂರು ದಾಖಲಿಸಿಕೊಂಡು ದಾಳಿ ನಡೆಸುತ್ತಿವೆ. ತನಿಖಾ ಸಂಸ್ಥೆಗಳು ನಿರಂತರವಾಗಿ ಕಿರುಕುಳ ಕೊಡುತ್ತಿವೆ. ಏನ್ ಕಿರುಕುಳ ಕೊಡುತ್ತಾರೆ ಕೊಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಾ ದಾಖಲೆಗಳು ಲೀಗಲ್ ಆಗಿವೆ ಭಯ ಪಡುವ ಅಗತ್ಯವಿಲ್ಲ ಎಂದರು.
40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಹೆದರಿಸಬೇಕು ಅಂತಾ ಹೆದರಿಸುತ್ತಿದ್ದಾರೆ. ತೊಂದರೆ ಕೊಡಲೆಂದೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಯಾವ ದಾಳಿ ಬೇಕಾದ್ರೂ ಮಾಡಲಿ, ಯಾವುದಕ್ಕೂ ಹೆದರಲ್ಲ. ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.