ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಲುಪ್ರಸಾದ್ ಯಾದವ್ ಅವರ ಆರ್ಜೆಡಿ ಪಕ್ಷದ ಸಂಸದರ ಮನೆಯ ಮೇಲೆ ಕೇಂದ್ರೀಯ ತನಿಖಾ ದಳವು ದಾಳಿ ನಡೆಸಿದೆ. ಪಕ್ಷದ ವರಿಷ್ಠ ಲಾಲು ಪ್ರಸಾದ್ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ನಾಯಕರಾದ ಅಶ್ಫಾಕ್ ಕರೀಂ ಮತ್ತು ಸುನೀಲ್ ಸಿಂಗ್ ಅವರ ಮೇಲೆ ಕೇಂದ್ರ ತನಿಖಾ ದಳವು ದಾಳಿ ನಡೆಸಿದೆ. ಈ ಸಂಬಂಧ ಹಲವು ಕಡೆಗಳಲ್ಲಿ ಶೋಧಕಾರ್ಯ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
“ಈ ದಾಳಿಗಳನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ, ಇದರಲ್ಲಿ ಯಾವುದೇ ಅರ್ಥವಿಲ್ಲ, ಭಯದಿಂದ ಶಾಸಕರು ತಮ್ಮ ಪರವಾಗಿ ಬರುತ್ತಾರೆ ಎಂದು ಭಾವಿಸಿ ಹೀಗೆ ಮಾಡುತ್ತಿದ್ದಾರೆ” ಎಂದು ಸುನೀಲ್ ಸಿಂಗ್ ಹೇಳಿದ್ದಾರೆ.
ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಆರ್ಜೆಡಿ ಆರ್ಎಸ್ ಸಂಸದ ಮನೋಜ್ ಝಾ, “ಇಡಿ ಅಥವಾ ಐಟಿ ಅಥವಾ ಸಿಬಿಐನಿಂದ ದಾಳಿ ಎನ್ನುವುದು ನಿಷ್ಪ್ರಯೋಜಕ. ಇದು ಬಿಜೆಪಿಯ ದಾಳಿಯಾಗಿದೆ. ಅವರು ಈಗ ಬಿಜೆಪಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಕಚೇರಿಗಳು ಬಿಜೆಪಿ ಸ್ಕ್ರಿಪ್ಟ್ನೊಂದಿಗೆ ನಡೆಯುತ್ತವೆ” ಎಂದು ಹರಿಹಾಯ್ದಿದ್ದಾರೆ.