ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಕ್ಕೆ ಶನಿವಾರ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಕ್ಯಾಂಪ್ಕೋ ಸಂಸ್ಥೆಯ ಸುರ್ವಣ ಮಹೋತ್ಸವದಲ್ಲಿ ಭಾಗಿಯಾದರು.
ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯದ ಮೂಲಕ ಭಾಷಣ ಆರಂಭಿಸಿದ ಅಮಿತ್ ಶಾ, ಕರಾವಳಿ ಭಾಗದ ಸಂಸ್ಕೃತಿ ಆಚರಣೆಯನ್ನು ಹಾಡಿ ಹೊಗಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ಹಾಸು ಹೊಕ್ಕಾಗಿದೆ. ಪರಶುರಾಮ ಸೃಷ್ಟಿಸಿದ ನಾಡಿದು. ಕಾಂತಾರ ಸಿನಿಮಾವನ್ನು ನಾನೂ ವೀಕ್ಷಿಸಿದ್ದೇನೆ. ಆ ಬಳಿಕವೇ ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಎಷ್ಟೊಂದು ಮೇರು ಮಟ್ಟದ್ದು ಎಂಬುದು ತಿಳಿಯಿತು ಎಂದು ಹೇಳಿದರು.
ಬಿಜೆಪಿ ಸರ್ಕಾರವು ಬಡವರಿಗೆ ಮನೆ, ಸಿಲಿಂಡರ್ ಸೌಕರ್ಯ, ಶೌಚಾಲಯ ವ್ಯವಸ್ಥೆ, ಪ್ರತಿ ಮನೆಗೂ ವಿದ್ಯುತ್ ಹೀಗೆ ಸಾಕಷ್ಟು ಸೌಕರ್ಯಗಳನ್ನು ನೀಡಿದೆ. ಗುಜರಾತ್ನಲ್ಲಿ ಸುಪಾರಿ ತಿನ್ನುವ ಪ್ರತಿಯೊಬ್ಬರೂ ಮಂಗಳೂರನ್ನು ನೆನಪು ಮಾಡಿಕೊಳ್ಳುತ್ತಾರೆ. ಗುಜರಾತ್ ಜನರು ತಿನ್ನುವ ಸುಪಾರಿ ತಯಾರಾಗಲು ಮಂಗಳೂರಿನ ಜನತೆ ಬೆಳೆದ ಅಡಿಕೆಯನ್ನೇ ಬಳಕೆ ಮಾಡಲಾಗುತ್ತೆ ಎಂದು ಅಮಿತ್ ಶಾ ಹೇಳಿದರು.
ಕ್ಯಾಂಪ್ಕೋ ಸಂಸ್ಥೆಯು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇಲ್ಲಿನ ಜನರ ಸೇವೆಯಿಂದ ಕ್ಯಾಂಪ್ಕೋ ಇಷ್ಟು ವರ್ಷಗಳ ಕಾಲ ಬೆಳೆಯಲು ಸಾಧ್ಯವಾಗಿದೆ. ಕ್ಯಾಂಪ್ಕೋ ಸಂಸ್ಥೆಯಲ್ಲಿ 1ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ. ಇದೊಂದು ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆದ ಸೊಸೈಟಿ ಆಗಿದೆ ಎಂದು ಹೇಳಿದರು.