ಹೊಸದಿಗಂತ ವರದಿ,ಹುಬ್ಬಳ್ಳಿ:
ವಾಣಿಜ್ಯ ನಗರಿ ಹುಬ್ಬಳ್ಳಿ ಹಿರಿಮೆಗೆ ಮತ್ತೊಂದು ಗರಿ ಸೇರಲಿದೆ. ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮುಂದಾಗಿದ್ದಾರೆಂದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಈ ಕೇಂದ್ರ ಸ್ಥಾಪನೆಯಿಂದ ರಾಜ್ಯದ ಎರಡನೇ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಹುಬ್ಬಳ್ಳಿಗೆ ಮತ್ತೊಂದು ಹಿರಿಮೆ ದೊರೆಯಲಿದೆ. ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್ಗಳ ಕೊರತೆಯನ್ನು ನೀಗಿಸಲು ಆರು ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಕೇಂದ್ರ ಸರಕಾರ ಸ್ಥಾಪಿಸುತ್ತಿದ್ದು ಉತ್ತರ ಕರ್ನಾಟಕದಲ್ಲಿ ಯಾವದೇ ವೈಮಾನಿಕ ಶಾಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿ ಹುಬ್ಬಳ್ಳಿಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿರುವುದು ಈ ಭಾಗದ ಜನತೆಗೆ ಸಂತೋಷದ ವಿಷಯವಾಗಿದೆ ಎಂದರು.
ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಈಗಿನ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಯಾ ಅವರುಗಳೊಂದಿಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ, ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿದ್ದೆ, ನನ್ನ ಬೇಡಿಕೆಗೆ ಸ್ಪಂದಿಸಿರುವ ಸಚಿವ ಜ್ಯೋತಿರಾದಿತ್ಯ ಸಿಂಯಾ ಅವರ ಈ ಕ್ರಮದಿಂದ ಇಡೀ ಉತ್ತರ ಕರ್ನಾಟಕದ ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ ಸಿಕ್ಕಂತಾಗಿದೆಯಲ್ಲದೇ ಈ ಕೇಂದ್ರ ಸ್ಥಾಪನೆಯಿಂದ ಕೈಗಾರಿಕೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಿಗೆ ಇತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಯಾ ಅವರುಗಳಿಗೆ ಧನ್ಯವಾದ ತಿಳಿಸಿದ್ದಾರೆ.