ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 8 ರಂದು ನಿವೃತ್ತರಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರು ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ ಸರ್ಕಾರ ಕೇಳಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿ ಕಾರ್ಯವಿಧಾನದ ಮೆಮೊರಾಂಡಮ್ (MoP) ಪ್ರಕಾರ, ಉತ್ತರಾಧಿಕಾರಿಯ ನೇಮಕಾತಿಗಾಗಿ ತಮ್ಮ ಶಿಫಾರಸುಗಳನ್ನು ಕಳುಹಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಪತ್ರ ಬರೆದಿದ್ದಾರೆ.
ಆಗಸ್ಟ್ 27 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಲಲಿತ್ ಅವರ ನಿವೃತ್ತಿಗೆ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ. ಆಗಸ್ಟ್ 26, 2022 ರಂದು ನಿವೃತ್ತರಾದ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಉತ್ತರಾಧಿಕಾರಿಯಾಗಿ ಯುಯು ಲಲಿತ್ ಅವರು ಆಯ್ಕೆಯಾದರು.
ಜಸ್ಟಿಸ್ ರಮಣ ಅವರು ಸಂಪ್ರದಾಯ ಮತ್ತು ಹಿರಿತನದ ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಮೂರ್ತಿ ಲಲಿತ್ ಅವರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ತರುವಾಯ ರಾಷ್ಟ್ರಪತಿಗಳು ನ್ಯಾಯಮೂರ್ತಿ ಲಲಿತ್ ಅವರನ್ನು ನೂತನ ಸಿಜೆಐ ಆಗಿ ನೇಮಕ ಮಾಡಿರುವುದಾಗಿ ದೃಢಪಡಿಸಿದರು. ನ್ಯಾಯಮೂರ್ತಿ ಲಲಿತ್ ಅಧಿಕಾರಾವಧಿಯು ನವೆಂಬರ್ 8ಕ್ಕೆ ಕೊನೆಯಾಗಲಿದೆ.
ಮುಖ್ಯ ನ್ಯಾಯಾಧೀಶರು ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಸಾಧ್ಯತೆಯಿದೆ. ಆ ಸಾಲಿನಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ.