ಹೊಸದಿಗಂತ ದಿಜಿಟಲ್ ಡೆಸ್ಕ್
ಮುಖ್ಯಮಂತ್ರಿ ಚಂದ್ರು ಇಂದು ಆಪ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ರಾವ್ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಗೊಂಡರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಎಎಪಿಗೆ ಯಾವ ಷರತ್ತು ಇಲ್ಲದೇ ಬಂದಿದ್ದೇನೆ. ಕಾಂಗ್ರೆಸ್ನಿಂದ ಸಾಮಾಜಿಕ ನ್ಯಾಯ ಸಿಗುತ್ತೆ ಅಂದಿಕೊಂಡಿದ್ದೆ. ವಾಜಪೇಯಿ ಆಡಳಿತ ನೋಡಿ ಬಿಜೆಪಿಯಲ್ಲೂ ಕೆಲಸ ಮಾಡಿದ್ದೆ. ಆದರೆ ರಾಜಕಾರಣವೇ ಬೇಡ ಅಂತ ನಿರ್ಧರಿಸಿದ್ದೆ. ಚುನಾವಣಾ ಕಣದಲ್ಲೂ ನಾನು ಇಲ್ಲ. ಆದರೆ ಆಪ್ ಅವರು ನನ್ನನ್ನು ಕರೆದ್ರು. ಕೇಜ್ರಿವಾಲ್ ಅವರಿಂದ ಆದ ಬದಲಾವಣೆ ನೋಡಿದ್ದೇನೆ. ಪರ್ಯಾಯ ವ್ಯವಸ್ಥೆ ನೋಡಿ ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಬ್ಬರಲ್ಲಿ ಮೂರು ಪಕ್ಷದ ವಿರುದ್ಧದ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಪರಿವರ್ತನೆಯಾಗಬೇಕಾಗಿದೆ ಎಂದರು.
ಎಲ್ಲ ಪಕ್ಷಗಳು ಕುಟುಂಬ ರಾಜಕಾರಣ ಮಾಡ್ತಿವೆ. ಕುಟುಂಬವೇ ಪಕ್ಷವಾಗಿದೆ. ಹೀಗಾಗಿ ಪೊರಕೆಯಿಂದ ಇದನ್ನು ಗುಡಿಸಬೇಕಾಗಿದೆ. ಜೆಡಿಎಸ್ಗೆ ಬಹುಮತ ಬರಲ್ಲ. 25 ಬಂದರೆ ಸಾಕು, ಉಳಿದವರಿಗೆ 110 ಬರದಿದ್ರೆ ಸಾಕು ಅಂತಿದ್ದಾರೆ ಅಷ್ಟೇ. ಕಾಂಗ್ರೆಸ್ನಲ್ಲಿ ಒಬ್ಬರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ಬೇಕು ಅಂತಿದ್ದಾರೆ. ಇನ್ನೊಬ್ಬರು ಒಮ್ಮೆ ಮುಖ್ಯಮಂತ್ರಿ ಆದರೆ, ಸಾಕು ಅಂತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.
ಇನ್ನೊಬ್ಬರು ಇಷ್ಟು ವರ್ಷ ಕೆಲಸ ಮಾಡಿದ್ದೀನಿ. ನಾನು ಮುಖ್ಯಮಂತ್ರಿ ಆಗ್ಬೇಕು ಅಂತ ದೆಹಲಿಯಲ್ಲಿ ಕುಳಿತು ಕಾಯ್ತಿದ್ದಾರೆ.
ನಾವು ಪೊರಕೆ ಹಿಡಿದು ಮೂರೂ ಪಕ್ಷಗಳನ್ನು ಗುಡಿಸಬೇಕು ಅಂದು ಕೊಂಡಿದ್ದೇವೆ. ಪೊರಕೆಯಲ್ಲಿ ಬಡಿಯಲು ಸಿದ್ಧರಿದ್ದೇವೆ, ಶಿಕ್ಷೆ ಕೊಡಲು ಸಿದ್ಧರಿದ್ದೇವೆ ಎಂದು ಟೀಕಿಸಿದರು.