ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನದ ಮಾಜಿ ನಾಯಕ ಮಾಜಿ ನಾಯಕ ಮತ್ತು ಸಹ ಆಟಗಾರರಾಗಿದ್ದ ಶಾಹಿದ್ ಅಫ್ರಿದಿ ನಾನು ಹಿಂದೂ ಎಂಬ ಕಾರಣಕ್ಕೆ ನನ್ನ ವಿರುದ್ಧ ಶಡ್ಯಂತ್ರ ನಡೆಸಿದ್ದರು ಎಂದು ಪಾಕ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.
ಐಎಎನ್ಎಸ್ ಸಂದರ್ಶನದಲ್ಲಿ ಮಾತನಾಡಿದ ಕನೇರಿಯಾ, ತಾನು ಆಡುತ್ತಿದ್ದ ವೇಳೆ ನಾಯಕರಾಗಿದ್ದ ಅಫ್ರಿದಿ, ನಾನು ಪಾಕ್ ರಾಷ್ಟ್ರೀಯ ತಂಡಕ್ಕೆ ಆಡುತ್ತಿರುವ ಹಿಂದೂ ಎಂಬ ಕಾರಣಕ್ಕಾಗಿ ತನ್ನನ್ನು ಹಿನಾಯವಾಗಿ ನಡೆಸಿಕೊಂಡ ಎಂದು ಆರೋಪಿಸಿದರು. ವಾಸ್ತವವಾಗಿ ಈ ವಿಚಾರದ ಕುರಿತಾಗಿ ಮಾತನಾಡುತ್ತಿರುವ ಮೊದಲ ವ್ಯಕ್ತಿ ದಾನಿಶ್ ಕನೇರಿಯಾ ಅಲ್ಲ. ಈ ಹಿಂದೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಹಿಂದೂ ಎಂಬ ಕಾರಣಕ್ಕಾಗಿ ಸ್ಪಿನ್ನರ್ ಕನೇರಿಯಾಗೆ ಪಾಕಿಸ್ತಾನ ತಂಡದಲ್ಲಿ ಕೆಲವು ಸದಸ್ಯರಿಂದ ಅನ್ಯಾಯವಾಗಿದೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರಸ್ತಾಪಿಸಿದ ಕನೇರಿಯಾ, ನನ್ನ ಸಮಸ್ಯೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ಮೊದಲ ವ್ಯಕ್ತಿ ಶೋಯೆಬ್ ಅಖ್ತರ್. ಈ ವಿಚಾರವಾಗಿ ಸತ್ಯ ಹೇಳಿದ್ದಕ್ಕಾಗಿ ಅವರಿಗೆ ಹ್ಯಾಟ್ಸ್ ಆಫ್. ಈ ವಿಚಾರ ಬಹಿರಂಗಪಡಿಸಿದ್ದಕ್ಕೆ ಹಲವಾರು ಪಾಕ್ ಅಧಿಕಾರಿಗಳು ಅವರ ಮೇಲೆ ಒತ್ತಡ ಹೇರಿದರು. ನಂತರ ಅವರು ಈ ವಿಚಾರ ಮಾತನಾಡುವುದನ್ನು ನಿಲ್ಲಿಸಿದರು. ಹೌದು, ಅಂತಹದ್ದೊಂದು ಅನ್ಯಾಯ ನನಗೆ ಸಂಭವಿಸಿದೆ. ಶಾಹಿದ್ ಅಫ್ರಿದಿಯಿಂದ ನನ್ನ ವೃತ್ತಿಜೀವನ ಹಾಳಾಗಿದೆ. ನಾವು ಒಂದೇ ವಿಭಾಗಕ್ಕೆ ಒಟ್ಟಿಗೆ ಆಡುತ್ತಿದ್ದೆವು. ಅವರು ಯಾವಾಗಲೂ ನನ್ನನ್ನು ಬೆಂಚ್ ನಲ್ಲಿ ಕೂರಿಸುತ್ತಿದ್ದರು. ನನಗೆ ಪಂದ್ಯಾವಳಿಗಳಲ್ಲಿ ಒಂದು ದಿನ ಆಡಲು ಬಿಡಲಿಲ್ಲ.
ನಾನು ತಂಡದಲ್ಲಿ ಇರುವುದನ್ನು ಆತ ಬಯಸಲಿಲ್ಲ. ಆತನೊಬ್ಬ ಸುಳ್ಳುಗಾರ, ಚಾರಿತ್ರ್ಯಹೀನ ವ್ಯಕ್ತಿ. ಆದರೆ, ನನ್ನ ಗಮನ ಕೇವಲ ಕ್ರಿಕೆಟ್ ಮೇಲೆ ಇದ್ದುದರಿಂದ ಅವರ ಎಲ್ಲಾ ಕುಟಿಲತೆಗಳನ್ನು ನಿರ್ಲಕ್ಷಿಸುತ್ತಿದ್ದೆ. ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಆತ ನನ್ನ ಬಗ್ಗೆ ಅಸೂಯೆ ಹೊಂದಿದ್ದ ಎಂದು ಕನೇರಿಯಾ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ