ಹೊಸದಿಂಗತ ಡಿಜಿಟಲ್ ಡೆಸ್ಕ್:
ತೆಲಂಗಾಣದ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ಮಿನಾರ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೂರು ಎಕ್ಸ್ಪ್ರೆಸ್ ಬೋಗಿಗಳು ಹಳಿತಪ್ಪಿದವು ಎನ್ನಲಾಗಿದೆ. ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತು ದಕ್ಷಿಣ ಮಧ್ಯ ರೈಲ್ವೆ ಹೇಳಿಕೆ ನೀಡಿದೆ. ಚೆನ್ನೈನಿಂದ ಹೈದರಾಬಾದ್ಗೆ ಬರುತ್ತಿದ್ದ ಚಾರ್ಮಿನಾರ್ ಎಕ್ಸ್ಪ್ರೆಸ್ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಹಳಿತಪ್ಪಿದೆ.
ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಡೆಡ್ ಎಂಡ್ ಲೈನ್ಗೆ ತಾಗುತ್ತಿದ್ದಂತೆ ಹಳಿತಪ್ಪಿವೆ. ಅದಾಗಲೇ ಸಾಕಷ್ಟು ಪ್ರಯಾಣಿಕರು ಇಳಿದಿದ್ದರು. ಮೇಲಾಗಿ ನಾಂಪಲ್ಲಿ ರೈಲು ನಿಲ್ದಾಣ ಕೊನೆಯದಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಕೆಲವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಅಪಘಾತದ ವೇಳೆ ರೈಲು ಅತಿ ಕಡಿಮೆ ವೇಗದಲ್ಲಿ ಸಂಚರಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇಳಿಯಲು ಸಿದ್ಧರಾಗಿದ್ದವರು ಗಾಯಗೊಂಡಿದ್ದಾರೆ. ರೈಲ್ವೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.