ಶಾಲಾ ಮಕ್ಕಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಂವಾದ: ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿನಿ!

ಹೊಸದಿಗಂತ ವರದಿ, ತುಮಕೂರು:

ತನ್ನ ತಂದೆತಾಯಿ ಇಬ್ಬರೂ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅವರ ನಿಧನದ ನಂತರ ಸರ್ಕಾರದಿಂದ ತಿಂಗಳಿಗೆ 3500 ಸಾವಿರ ಧನಸಹಾಯ ಸಿಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ನಾನು ಉತ್ತಮ ರೀತಿ ವಿದ್ಯಾಭ್ಯಾಸ ಮಾಡಿ ವೈದ್ಯನಾಗಬೇಕು ಅಂದುಕೊಂಡಿದ್ದೇ‌ನೆ….
ಇವು ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರಿನಲ್ಲಿ ಇಂದು ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೊಸ ಕೆರೆಯ ಜೀವನ್ ಜೈ ಹಿಂದ್ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಅವರ ಮನಮಿಡಿಯುವ ಮಾತುಗಳು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸರ್ಕಾರ ರೈತರ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡುತ್ತಿದೆ. ಕೋವಿಡ್ ನಿಂದ ಮೃತಪಟ್ಟವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ, ಪ್ರತಿ ತಿಂಗಳೂ 3500 ರೂ.ಗಳ ಸಹಾಯಧನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಪೂರ್ಣವಾಗಿ ನೆರವು ನೀಡುತ್ತದೆ. ಧೈರ್ಯವಾಗಿ ಓದು , ನೀನು ಯಶಸ್ವಿಯಾಗುವೆ. ನಿನ್ನಿಂದ ಹಲವಾರು ಜನರಿಗೆ ಒಳ್ಳೆಯದಾಗುತ್ತದೆ. ಆತ್ಮಸ್ಥೆರ್ಯದಿಂದ ಮುಂದುವರೆಯಬೇಕು ಎಂದು ಧೈರ್ಯ ಹೇಳಿದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಕಳೆದ ವರ್ಷ 5 ಕೋಟಿ ರೂ.ಗಳನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಈ ವರ್ಷ 10 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದರು.

ಪೌಷ್ಟಿಕ ಆಹಾರ:
ತೊಂಡಗೆರೆ ಸರ್ಕಾರಿ ಪ್ರೌಢಶಾಲೆಯ ರಾಕೇಶ್ ಪೌಷ್ಟಿಕ ಆಹಾರ ಒದಗಿಸಲು ಇಟ್ಟ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಪೌಷ್ಟಿಕ ಆಹಾರ ಒದಗಿಸುವ ಅಕ್ಷರ ದಾಸೋಹ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶ ಬಹಳ ಮುಖ್ಯ. ಪೌಷ್ಟಿಕಾಂಶ ಇದ್ದರೆ ಮಾತ್ರ ಬೆಳವಣಿಗೆಯಾಗುತ್ತದೆ ಮತ್ತು ವಿದ್ಯಾಭ್ಯಾಸವನ್ನು ಚೆನ್ನಾಗಿ ಮಾಡಬಹುದು. ಈ ವರ್ಷ ಬಜೆಟ್‍ನಲ್ಲಿ ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳಿಗೆ ನೀಡುವ ಆಹಾರವನ್ನು ಸಾಮಾನ್ಯ ಕೊರತೆ ಇದ್ದವರಿಗೂ ನೀಡಬೇಕೆಂದು ತೀರ್ಮಾನಿಸಲಾಗಿದೆ. ಇನ್ನೂ ಹೆಚ್ಚು ಮಾಡಲು ವಿಶೇಷ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸೈಕಲ್
ಬೆಳ್ಳಾವಿ ಸರ್ಕಾರಿ ಪಬ್ಲಿಕ್ ಪ್ರೌಢಶಾಲೆಯ ಅಮೂಲ್ಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಎಂ, ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಶಾಲೆಗಳು ತೆರೆದಿರಲಿಲ್ಲ. ಈ ವರ್ಷ ಶಾಲೆಗಳು ಪ್ರಾರಂಭವಾಗಿವೆ. ನಿಯಮಿತವಾಗಿ ಶಾಲೆಗೆ ಬನ್ನಿ ಖಂಡಿತವಾಗಿ ಸೈಕಲ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ಇತ್ತರು.

ಶಾಲಾ ಕೊಠಡಿಗಳ ನಿರ್ಮಾಣ
ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ, ಈ ವರ್ಷ ವಿಶೇಷವಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸುಮಾರು 1000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸುಮಾರು 6500 ಕ್ಕೂ ಹೆಚ್ಚು ಕೊಠಡಿಗಳನ್ನು ಈ ವರ್ಷ ನಿರ್ಮಾಣ ಮಾಡಲಾಗುವುದು. ಈ ಪೈಕಿ ಚಿಕ್ಕನಹಳ್ಳಿ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಲು ಆದೇಶ ನೀಡಲಾಗುವುದು ಎಂದರು. ಕರ್ನಾಟಕ ರಾಜ್ಯವಾದ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳ ನಿರ್ಮಾಣವಾಗಿರಲಿಲ್ಲ. ಇದೊಂದು ವಿಶೇಷ ಕಾರ್ಯಕ್ರಮ. ಇದಾದರೆ, ಕೊಠಡಿಗಳು ಸೋರುವುದು, ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಿಕ್ಷಣ ಇಲಾಖೆ ಚುರಕಾಗಿ ಎಲ್ಲೆಲ್ಲಿ ಶಾಲೆಗಳು ಸೋರುತ್ತಿವೆ ಎಂಬ ವರದಿಯನು ಸಲ್ಲಿಸಿದರೆ ಆದಷ್ಟೂ ಬೇಗನೆ ಕೊಠಡಿ ನಿರ್ಮಾಣ ಪ್ರಾರಂಭಿಸಲಾಗುವುದು. ಈ ವರ್ಷದ ಅಂತ್ಯದೊಳಗೆ ನಿರ್ಮಾಣ ಪೂರ್ಣಗೊಳ್ಳಬೇಕೆನ್ನುವುದು ನನ್ನ ಇಂಗಿತ ಎಂದರು.

ಯಾವುದು ಬೆಸ್ಟ್
ಉತ್ತರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವಿಕಾ ಮಾತನಾಡಿ ನಿಮ್ಮ ಬಾಲ್ಯದ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಇರುವ ವ್ಯತ್ಯಾಸವೇನು? ಮತ್ತು ಇವೆರಡರಲ್ಲಿ ಯಾವುದು ಉತ್ತಮ ಎನಿಸುತ್ತದೆ ಎಂದು ಪ್ರಶ್ನಿಸಿದಳು. ಕಷ್ಟದ ಪ್ರಶ್ನೆ ಕೇಳಿದೆ ಎಂದ ಮುಖ್ಯಮಂತ್ರಿಗಳು, ನಮ್ಮ ಬಾಲ್ಯದ ಶಿಕ್ಷಣ ಗುರುಗಳ ಕೇಂದ್ರಿತವಾಗಿತ್ತು. ಸಾಮಾನ್ಯ ಜ್ಞಾನ, ವಿಜ್ಞಾನ, ಇತಿಹಾಸ, ಭೌಗೋಳಿಕ ವಿಚಾರಗಳನ್ನು ಅತ್ಯಂತ ಸುಂದರವಾಗಿ ಕಥೆಗಳನ್ನು ಹೇಳಿ ಮನವರಿಕೆ ಮಡಿಕೊಡುತ್ತಿದ್ದರು. ಈಗ ಅಂತರ್ಜಾಲವಿದೆ. ಬಹಳಷ್ಟು ವಿಷಯಗಳನ್ನು ನೀವೇ ತಿಳಿದುಕೊಳ್ಳಬಹುದು. ತಂತ್ರಜ್ಞಾನದ ಬಳಕೆ ಬಹಳ ಮುಖ್ಯ. ಇದು ಬದಲಾವಣೆ. ಗುರುಗಳ ಮಾತನ್ನು ಕೇಳಿ ವಿದ್ಯಾರ್ಜನೆ ಮಾಡಿದರೆ ಎರಡೂ ಬೆಸ್ಟ್. ಅಂದು ಜ್ಞಾನವಿತ್ತು. ಈಗ ತಂತ್ರಜ್ಞಾನವಿದೆ. ಜ್ಞಾನ ಮತ್ತು ತಂತ್ರಜ್ಞಾನ ಎರಡನ್ನೂ ಬಳಕೆ ಮಾಡಲು ನೀವು ಕಲಿಯಲೇಬೇಕು. ಇಂದು ಅಂತರರಾಷ್ಟ್ರೀಯ ಮಟ್ಟದ ಪೈಪೋಟಿ ಇದೆ. ನಮ್ಮ ಮಕ್ಕಳೂ ಈ ಪೈಪೋಟಿಯಲ್ಲಿ ಸ್ಪರ್ಧಿಸಲು ಜ್ಞಾನ, ತಂತ್ರಜ್ಞಾನ ಮತ್ತು ತಂತ್ರಾಂಶ ಜ್ಞಾನವೂ ಇರಬೇಕು ಎಂದರು.

ತುಮಕೂರು ತಾಲ್ಲೂಕಿನ ಕೋರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿರಂಜೀವಿ ಮಾತನಾಡಿ ನನಗೆ ಕೋವಿಡ್ ಲಸಿಕೆ ನೀಡಲಾಗಿದೆ. ನನ್ನ ತಂಗಿಗೆ 3 ವರ್ಷ. ಅವಳಿಗೆ ಲಸಿಕೆ ಹಾಕಿಲ್ಲ. ಆ ವಯೋಮಾನದವರಿಗೂ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸುವಂತ ಮನವಿ ಮಾಡಿದನು. ಪ್ರಸ್ತುತ 6 -12 ನೇ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಮುಂದೆ ಅವರಿಗೂ ಲಸಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!