- ಹಿತೈಷಿ
ಹನಿ ಹನಿಗೂಡಿದ್ರೆ ಹಳ್ಳ, ತೆನೆ ತೆನೆಗೂಡಿದ್ರೆ ಬಳ್ಳ ಅಂತ ಕೇಳಿದ್ದೀವಿ ಆದರೆ ಅದಕ್ಕೆ ನೈಜ್ಯ ಉದಾಹರಣೆಯಾಗಿ ನಿಲ್ತಾರೆ ನಮ್ಮ ತಮಿಳುನಾಡಿನ ಚಿನ್ನಪಿಳ್ಳೈ.
ಮಧುರೈನ ಸಣ್ಣ ಹಳ್ಳಿಯಲ್ಲಿ ಪ್ರಾರಂಭವಾದ ಇವರ ಉದ್ಯಮ ಈಗ ದೇಶದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮವಾಗಿ ತಲೆ ಎತ್ತಿ ನಿಂತಿದೆ. ಮಹಿಳೆಯರಿಗೆ ಸಾಲ ನೀಡುವ ಮೂಲಕ ಬಡತನದಿಂದ ಹೊರಬರಲು ಸಹಾಯ ಮಾಡಿದವರು ಚಿನ್ನಪಿಳ್ಳೈ.
ಪ್ರಾರಂಭಿಸಿದ್ದು ಹೇಗೆ?
1990ರ ದಶಕದಲ್ಲಿ ತಮ್ಮ ಸುತ್ತಮುತ್ತಲಿನ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಪ್ರಾರಂಭಿಸಿದ್ದು ಈ ಕಲಾಂಜಿಯಂ ಬ್ಯಾಂಕ್.
ಚಿನ್ನಪಿಳ್ಲೈ 15 ಮಹಿಳೆಯರಿಂದ ತಲಾ 20 ರೂ. ಸಂಗ್ರಹಿಸಿದರು. ನಂತರ ಅದನ್ನು ಅಗತ್ಯವಿರುವವರಿಗೆ ಸಾಲವಾಗಿ ಕೊಡುವುದರ ಮೂಲಕ ವ್ಯವಹಾರ ಸ್ಥಾಪಿಸಿದರ. ಕೆಲವು ವರ್ಷಗಳ ನಂತರ ಈ 20 ರೂ. ಮೊತ್ತವನ್ನು 50ಕ್ಕೆ ಹೆಚ್ಚಿಸಿ 5 ವರ್ಷದಲ್ಲಿ 10 ಸಾವಿರ ರೂ. ಉಳಿಸಿದರು.
ಹೀಗೆ ಪ್ರಾರಂಭವಾದ ಬ್ಯಾಂಕ್ ಈಗ ದೇಶದ 12 ರಾಜ್ಯಗಳಿಗೆ ವಿಸ್ತಾರವಾಗಿರೋದು ವಿಶೇಷ. ಈ ಕಿರುಸಾಲದ ಬ್ಯಾಂಕಿಂಗ್ ಸಂಸ್ಥೆ ಧಾನ್ ಫೌಂಡೇಷನ್ ಸಹಾಯದಿಂದ ಯಾವುದೇ ಆದಾಯವಿಲ್ಲದೆ ಇರುವ ಗ್ರಾಮೀಣ ಮಹಿಳೆಯರಿಗೆ ಸಾಲ ನೀಡಿದೆ. ಇದರಿಂದ ಮಹಿಳೆಯರನ್ನು ಸ್ವಾವಲಂಬಿಯರನ್ನಾಗಿಸಲು ಸಹಾಯ ಮಾಡಿದೆ.
ಅನುಭವ?
ಬ್ಯಾಂಕ್ ತೆರೆಯಬೇಕು ಎಂದು ಓಡಾಡುತ್ತಿದ್ದಾಗ ಜನರು, ಶ್ರೀಮಂತರು ಸೇರಿ ಕೊನೆಗೆ ಗಂಡನಿಂದಲೂ ನಿಂದನೆಗೆ ಒಳಗಾಗಿದ್ದರು ಚಿನ್ನಪಿಳ್ಳೈ. ಎಷ್ಟೋ ಸಲ ಮನೆಯಿಂದ ಹೊರಗೆ ಮಲಗಿ, ಹಸಿವಿನಲ್ಲಿ ಬದುಕಿದ್ದರು ಇವರು. ದಲಿತರೆಂಬ ತಾರತಮ್ಯ ಹೆಚ್ಚಿದ್ದ ಕಾಲದಲ್ಲಿ ಚಿನ್ನಪಿಳ್ಳೈ ಜತೆ ನಿಂತವರು ಅಲ್ಲಿನ ಮಹಿಳೆಯರು.
ಲಾಭ?
ಕೆಲವು ಮಹಿಳೆಯರು ಇಲ್ಲಿಂದ ಸಾಲ ಪಡೆದು ತಮ್ಮ ಮಕ್ಕಳ ವಿದ್ಯಾಬ್ಯಾಸ, ಮದುವೆಗೆ ಬಳಸಿಕೊಂಡರೆ. ಮತ್ತೆ ಕೆಲವರು ಈ ದುಡ್ಡಿನಿಂದ ಹಾಲಿನ ಡೈರಿ, ಮೀನು ಸಾಗಣೆ, ಟೈಲರಿಂಗ್, ಕೃಷಿ ಸೇರಿದಂತೆ ಸಾಕಷ್ಟು ಜೀವನೋಪಾಯಕ್ಕೆ ಅಗತ್ಯವಿರುವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಚಿನ್ನಪಿಳ್ಳೈ ಕೆಲಸಕ್ಕೆ ಶಹಭಾಷ್ ಗಿರಿ ನೀಡುವ ಜನರು. ಆಕೆಯ ಮನವಿಯನ್ನೂ ಎಂದಿಗೂ ತಳ್ಳಿ ಹಾಕಿಲ್ಲ. ಆಕೆಯ ಮನವಿಯಂತೆ ತನ್ನ ಗ್ರಾಮಕ್ಕೆ ರಸ್ತೆ ವ್ಯವಸ್ಥೆ, ಬಸ್ ವ್ಯವಸ್ಥೆ ಜೊತೆಗೆ 10 ಮನೆಗಳನ್ನೂ ನಿರ್ಮಾಣ ಮಾಡಲಾಗಿದೆ.
ಸಾಧನೆ?
2019ರವೇಳೆಗೆ ಈ ಕಲಾಂಜಿಯಂ ಖಾತೆಯಲ್ಲಿ 5 ಕೋಟಿ ರೂ. ಉಳಿತಾಯ ಮೊತ್ತವಿದೆ ಎನ್ನುವುದು ಸಾಧನೆಯ ಮತ್ತೊಂದು ಹಂತವಾಗಿದೆ. ಸಂಸ್ಥೆಯ ಎಲ್ಲಾ ಬ್ರಾಂಚ್ ಗಳನ್ನು ಸೇರಿಸಿದರೆ ಒಟ್ಟು ಮೊತ್ತ 100 ಕೋಟಿ ರೂ. ಮೀರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಕಲಾಂಜಿಯಂ ತನ್ನ ಪ್ರತ್ಯೇಕ ಕಚೇರಿ ಹೊಂದಿದ್ದು, ಅಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ಈ ಮಹಿಳಾ ಸಾಧಕಿಯನ್ನು ಗುರುತಿಸಿದ ಸರ್ಕಾರ 2019ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದೆ.
ಸಾಧನೆಯ ಶಿಖರವನ್ನೇರಲು ಸಣ್ಣ ಹೆಜ್ಜೆ ಇಡುವುದು ತುಂಬಾ ಮುಖ್ಯ ಎಂದು ನಮ್ಮೆದುರು ಸಾಬೀತು ಮಾಡಿ, ನಮ್ಮ ನಡುವೆಯೇ ಬದುಕಿದ್ದಾರೆ ಚಿನ್ನಪಿಳ್ಳೈ.