ದಿಗಂತ ವರದಿ ಚಿತ್ರದುರ್ಗ:
ಗ್ರಾಮೀಣ ಜನರಿಗೆ ಉತ್ತಮ ರಸ್ತೆ, ಜೊತೆಗೆ ಕುಡಿಯುವ ನೀರು, ಶಿಕ್ಷಣ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಅಯ್ಯನಹಳ್ಳಿ ಕುರುಬರಟ್ಟಿ, ಚನ್ನಯ್ಯನಹಟ್ಟಿ, ಆಯತೋಳ ಗ್ರಾಮಗಳಲ್ಲಿ ಪಿಎಂಜಿಎಸ್ವೈ ಯೋಜಯಡಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಯ್ಯನಹಳ್ಳಿ ಕುರುಬರಹಟ್ಟಿ, ಚನ್ನಯ್ಯನಹಟ್ಟಿಯಲ್ಲಿ ೧.೨೫ ಕೋಟಿ ವೆಚ್ಚದಲ್ಲಿ ೯ ರಿಂದ ೧೦ ಕಿಲೋ ಮೀಟರ್ ಡಾಂಬರೀಕರಣ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಅಯ್ಯನಹಳ್ಳಿ ಕುರುಬರಹಟ್ಟಿ ಗ್ರಾಮದಲ್ಲಿ ಚಿಕ್ಕ ಚಿಕ್ಕ ಒಂದೆರೆಡು ಸಿ.ಸಿ.ರಸ್ತೆಗಳು ಮಾತ್ರ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಅನುದಾನ ನೋಡಿಕೊಡು ರಸ್ತೆ ಮಾಡಿಕೊಡುತ್ತೇನೆ ಎಂದರು.
ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ೪ ರಿಂದ ಚನ್ನಯ್ಯನಹಟ್ಟಿ, ಅಯ್ಯನಹಳ್ಳಿ ಕುರುಬರಹಟ್ಟಿ, ಆಯತೋಳ, ಲಂಬಾಣಿಹಟ್ಟಿ ಸೇರಿ ಅನೇಕ ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ರಸ್ತೆಗಳು ಉತ್ತಮವಾಗಿದ್ದರೆ ಎಲ್ಲಾ ಸರಕು ಸಾಗಾಣಿಕೆ, ಶಾಲಾ ಮಕ್ಕಳಿಗೆ, ಕೃಷಿಕರಿಗೆ ಸಾಕಷ್ಟು ಅನುಕೂಲ. ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಚಿಕ್ಕ ಪುಟ್ಟ ರಸ್ತೆಗಳು ಸೇರಿ ಉಳಿದ ಎಲ್ಲಾ ರಸ್ತೆಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ಶಿವಾನಂದ, ರುದ್ರಮ್ಮ, ಶಂಕರಮ್ಮ, ಗೋವಿಂದನಾಯ್ಕ, ಕಾವ್ಯಬಾಯಿ, ಶಾರದಾಬಾಯಿ, ಪಿಎಂಜಿಎಸ್ವೈ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್, ಮುಖಂಡರಾದ ಬಸಣ್ಣ, ಮಾರುತಿ, ತಿಪ್ಪೇಶ್ ನಾಯ್ಕ, ಕುಮಾರ ನಾಯ್ಕ ಈ ಸಂದರ್ಭದಲ್ಲಿ ಹಾಜರಿದ್ದರು.