ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲಿರುವ ಚಿತ್ರದುರ್ಗ: ಅಶೋಕ ಸಿದ್ದಾಪುರ, ಬ್ರಹ್ಮಗಿರಿ ಬೆಟ್ಟ ತಪ್ಪಲಿನಲ್ಲಿ ಉತ್ಖನನ

ಹೊಸದಿಗಂತ ವರದಿ, ಚಿತ್ರದುರ್ಗ :  
ಎಂ.ಜೆ.ತಿಪ್ಪೇಸ್ವಾಮಿ
ಚಿತ್ರದುರ್ಗ ಎಂದ ಕೂಡಲೇ ತಟ್ಟನೆ ನೆನಪಾಗುವುದು ಇಲ್ಲಿನ ಏಳು ಸುತ್ತಿನ ಕಲ್ಲಿನ ಕೋಟೆ. ಮದಕರಿ ನಾಯಕರ ವಂಶಸ್ಥರ ರಾಜರ ಕಾಲದಲ್ಲಿ ನಿರ್ಮಿಸಿದ ಅನೇಕ ಸ್ಮಾರಕಗಳು ನೋಡುಗರ ಗಮನ ಸೆಳೆಯುತ್ತವೆ. ಹಾಗಾಗಿ ಚಿತ್ರದುರ್ಗವನ್ನು ಐತಿಹಾಸಿಕ ನಗರಿ ಎಂದು ಕರೆಯಲಾಗುತ್ತದೆ. ಅದರಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಪುರಾತನ ಕಾಲದ ಅನೇಕ ಸ್ಮಾರಕಗಳಿವೆ. ಮೊಳಕಾಲ್ಮುರು ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಾಮ್ರಾಟ್ ಅಶೋಕನ ಕಾಲದಲ್ಲಿ ನಿರ್ಮಿಸಿದ ಶಿಲಾಶಾಸನವಿದೆ. ಇದಕ್ಕೆ ಅಶೋಕ ಸಿದ್ದಾಪುರ ಎಂದೇ ಕರೆಯಲಾಗುತ್ತದೆ.

ಚಿತ್ರದುರ್ಗ ನಗರದ ಐತಿಹಾಸಿಕ ಕೋಟೆ, ಚಂದ್ರವಳ್ಳಿ ಪ್ರದೇಶ, ಧವಳಪ್ಪನ ಗುಡ್ಡ ಸೇರಿದಂತೆ ವಿವಿಧ ಭಾಗಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಸಂಶೋಧನೆಗಳು ನಡೆದಿವೆ. ಹುಲ್ಲೂರು ಶ್ರೀನಿವಾಸ ಜೋಯಿಸರು, ಲಕ್ಷ್ಮಣ ತೆಲಗಾವಿ, ಪ್ರೊ.ಶ್ರೀಶೈಲ ಆರಾಧ್ಯ, ಡಾ.ಬಿ.ರಾಜಶೇಖರಪ್ಪ ಸೇರಿದಂತೆ ಅನೇಕರು ಸಂಶೋಧನೆ ನಡೆಸುವ ಮೂಲಕ ಹೊಸ ಹೊಸ ಐತಿಹಾಸಿಕ ದಾಖಲೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಅದರಂತೆ ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಸೇರಿದಂತೆ ನಾನಾ ಕಡೆಗಳಲ್ಲಿ ಉತ್ಖನನ ನಡೆಸಲಾಗಿದೆ.

ಈಗ ಮತ್ತೊಮ್ಮೆ ಇದೇ ಅಶೋಕ ಸಿದ್ದಾಪುರದ ಬಳಿಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಉತ್ಖನನ ಆರಂಭಿಸಲಾಗಿದೆ. ಇದರಿಂದಾಗಿ ಬರೋಬ್ಬರಿ ೭೮ ವರ್ಷಗಳ ಸುದೀರ್ಘ ಅವಧಿಯ ನಂತರ ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಹಾಗೂ ಬ್ರಹ್ಮಗಿರಿ ಬೆಟ್ಟ ಜಗತ್ತಿನ ಗಮನ ಸೆಳೆದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಅಮೇರಿಕಾದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯ ಸಹಯೋಗದ ಉತ್ಕನನ ಆರಂಭಿಸಲಾಗಿದೆ. ಆಧುನಿಕ ಉಪಕರಣಗಳು, ನೂತನ ತಂತ್ರಜ್ಞಾನದ ನೆರವಿನಿಂದ ಸಂಶೋಧನೆ ಕೈಗೊಂಡಿರುವ ಸಂಶೋಧಕರು ಸಾಕಷ್ಟು ಪಳೆಯುಳಿಕೆಗಳನ್ನು ಸಂಗ್ರಹಿಸಿದ್ದಾರೆ.

ಈ ಹಿಂದೆ ಸರ್ ಮಾರ್ಟಿಮರ್ ವೀಲರ್ ಎಂಬುವರು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಉತ್ಖನನ ನಡೆಸಿದ್ದರು. ಆಗ ಈ ಸ್ಥಳದಲ್ಲಿ ನವ ಶಿಲಾಯುಗದಿಂದ ಮಧ್ಯ ಕಾಲೀನ ಅವಧಿಯವರೆಗಿನ ಸಾಂಸ್ಕೃತಿಕ ಜಗತ್ತು ಪತ್ತೆಯಾಗಿತ್ತು. ಪ್ರಸ್ತುತ ನಡೆಸುತ್ತಿರುವ ಉತ್ಖನನದಲ್ಲಿ ಪ್ರತಿಯೊಂದು ಸಾಂಸ್ಕೃತಿಕ ಅವಧಿಯ ವಿವರವನ್ನು ಸ್ಟ್ಯಾಟಿಕ್ ಗ್ರಾಫಿಕ್ ದಾಸ್ತಾವೇಜು ಮತ್ತು ಕಲಾಕೃತಿ ವಿಶ್ಲೇಷಣೆಯನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ, ಪುರಾತತ್ವ ಶಾಸ್ತ್ರಜ್ಞ ಬಿ.ಪಿ.ಎನ್.ಚಂದ್ರು, ಪೆನ್ಸಿಲ್ವೇನಿಯಾ ವಿ.ವಿ. ಅಧ್ಯಾಪಕ ಹಾಗೂ ಕರ್ನಾಟಕ ವಿ.ವಿ. ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ರವಿ ಕೋರಿಸೆಟ್ಟರ್ ಒಳಗೊಂಡಂತೆ ಧಾರವಾಡ, ಚಿತ್ರದುರ್ಗ ಕಂದಾಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾರ್ಚ್ ಅಂತ್ಯದವರೆಗೆ ಉತ್ಖನನ ನಡೆಯುತ್ತಿದೆ.

ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕ್ಯಾನ್ ಮಾರಿಸನ್, ಪೆನ್ಸಿಲ್ವೇನಿಯಾ ವಿ.ವಿ.ಯ ಡಾ.ಮಾರ್ಕ್ ಟಿ. ಲೈಸೆಟ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಅಧೀಕ್ಷಕ ಎನ್.ವೀರರಾಘವನ್, ಡಾ.ಆರ್.ರಮೇಶ್, ಡಾ.ಬಿ.ವಿನುರಾಜ್, ಸರ್ವೆಯರ್‌ಗಳಾದ ಮುರುಳಿ ಮೋಹನ್, ಛಾಯಾಗ್ರಾಹಕ ಬಸವರಾಜ್ ಮಾಯಾಚಾರಿ ಸುರಕ್ಷಣಾ ಸಹಾಯಕ ಪೊನ್ನತೋಟ ಸುಧೀರ್, ಪೆನ್ಸಿಲ್ವೇನಿಯಾ ವಿ.ವಿ. ಸಂಶೋಧಕ ಡಾ.ಆಸ್ಮಿನ್ ಚಾಡ್‌ಹಿಲ್, ಡಾ.ಸಿ.ಎಸ್.ಅಂಬಲಿ, ಪಿಹೆಚ್‌ಡಿ ವಿದ್ಯಾರ್ಥಿಗಳಾದ ಮೊರಿಯಾ, ಮೆಕೆನಾ, ಜೆನ್ನಿಫರ್ ಫೆಂಗ್ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಉತ್ಕನನ ಕಾರ್ಯ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುಮಾರು ೨೦೦೦ ವರ್ಷಗಳಷ್ಟು ಹಳೆಯ ಕಾಲದ ಮಡಿಕೆ ಚೂರುಗಳು, ಮೂಳೆಗಳು, ಮಣಿಗಳು, ಕಲ್ಲಿನ ಆಯುಧಗಳು, ಕುಟ್ಟುವ ಒರಳು ಕಲ್ಲು ಸೇರಿದಂತೆ ಅನೇಕ ಪುರಾತನ ವಸ್ತುಗಳು, ಪಳಯುಳಿಕೆಗಳು ಪತ್ತೆಯಾಗಿವೆ. ಇದರಿಂದ ಸುಮಾರು ೨ ಸಾವಿರ ವರ್ಷಗಳ ಹಿಂದಿನ ಪುರಾತನ ನಾಗರೀಕತೆಯ ಸಾಂಸ್ಕೃತಿಕ ಇತಿಹಾಸ   ಅನಾವರಣಗೊಳ್ಳುತ್ತಿದೆ. ಈ ಉತ್ಖನನ ಫಲಪ್ರದವಾದಲ್ಲಿ ಅಶೋಕ ಸಿದ್ದಾಪುರದ ಹೆಸರು  ಜಗತ್ತಿನ ಇತಿಹಾಸ ಪುಟಗಳಲ್ಲಿ ಮತ್ತೊಮ್ಮೆ ರಾರಾಜಿಸಲಿದೆ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!