ಸಿಐಡಿಯಿಂದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ: ಸಚಿವ ನಾಗೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

2015-16ರಲ್ಲಿ ಅರ್ಜಿ ಸಲ್ಲಿಸದೆ, ಪರೀಕ್ಷೆ ಬರೆಯದೆ, ಅರ್ಹತೆ ಇಲ್ಲದೇ ಶಿಕ್ಷಕರಾಗಿ ನೇಮಕವಾಗಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅವರು ತಿಳಿಸಿದ್ದಾರೆ.
ಶಾಸಕ ಪಿ ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಸ್​ಎಸ್​ಎಲ್​ಸಿ ಮಂಡಳಿಯ ನಿರ್ದೇಶಕರಿಂದ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಬೆಂಗಳೂರು ವಿಭಾಗದಲ್ಲಿ ಗೊತ್ತಾದ ನಂತರ ಸಿಐಡಿಗೆ ವಹಿಸಲಾಗಿದೆ ಎಂದರು.
ಸಿಇಟಿ ಬರೆಯದೇ, ಅರ್ಹತೆ ಪಡೆಯದೆ, ಅರ್ಜಿ ಸಲ್ಲಿಸದೆ 16 ಮಂದಿ ಶಿಕ್ಷಕರಾಗಿ ನೇಮಕವಾಗಿರುವುದು ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ ರೀತಿ 35 ರಿಂದ 40 ಮಂದಿ ಶಿಕ್ಷಕರಾಗಿ ನೇಮಕವಾಗಿರುವ ಮಾಹಿತಿ ಇದೆ. ಸಿಐಡಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಪಿ. ರಾಜೀವ್, ಸಿಇಟಿ ಪರೀಕ್ಷೆ ಬರೆಯದೆ ಶಿಕ್ಷಕರಾಗಿ ಹೇಗೆ ನೇಮಕವಾದರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಎ. ಎಸ್. ನಡಹಳ್ಳಿ, ಇದನ್ನು ಬಗೆದರೆ ದೊಡ್ಡ ವಿಚಾರವಿದೆ. ಇದು ದೊಡ್ಡ ಹಗರಣ. ತಪ್ಪಿತಸ್ಥರು ಯಾರು ಎಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!