ಧೀಮಂತ ನಾಯಕನ ಜನ್ಮದಿನ: ನಿಸ್ವಾರ್ಥ ಸೇವೆ, ಭಾರತದ ಕೀರ್ತಿ ಪಸರಿಸಿದ ನಾಯಕನೆಂದು ಸಿಎಂ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಭಿವೃದ್ಧಿಯ ಹರಿಕಾರ, ಭಾರತ ದೇಶ ಕಂಡ ಅಪ್ರತಿಮ ನಾಯಕ, ಸಮನ್ವಯದ ಸಾಧಕ, ಜಗಮೆಚ್ಚಿದ ನೇತಾರ ಪ್ರಪಂಚಕ್ಕೆ ಭಾರತದ ಹೆಸರಿನ ಕೀರ್ತಿ ಪಸರಿಸಿದ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಅವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷವಾಗಿ ಶುಭಾಶಯ ತಿಳಿಸಿದರು. ಇಂದು (ಸೆ.17) ಪ್ರಧಾನಿ ನರೇಂದ್ರ ಮೋದಿ 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ಟರ್‌ ವೇದಿಕೆಯ ಮೂಲಕ ಶುಭಕೋರಿದ್ದಾರೆ.

ನಮ್ಮ ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧ ಮತ್ತು ಘನತೆಯ ರಾಷ್ಟ್ರವನ್ನಾಗಿ ಮಾರ್ಪಡಿಸುವಲ್ಲಿ, ಹಾಗೂ ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷವಾದ ಗೌರವ ಲಭಿಸಲು ಮಹತ್ತರ ಪಾತ್ರ ವಹಿಸಿರುವ ಭಾರತದ ಆದರ್ಶನಾಯಕರಾದ ಪ್ರಧಾನ ಮಂತ್ರಿ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಮೋದಿ ಅವರಿಗೆ ಆಯುಷ್ಯ, ಆರೋಗ್ಯ ಪ್ರಾಪ್ತಿಯಾಗಲೆಂದು ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಶುಭಾಶಯ ತಿಳಿಸಿದ್ದಾರೆ. ನರೇಂದ್ರ ಮೋದಿಯವರು ಸಿಎಂ, ಪಿಎಂ ಆಗಿ ಕಳೆದ 20ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಗುಜರಾತ್‌ನಲ್ಲಿ 4 ಬಾರಿ ಮುಖ್ಯಮಂತ್ರಿಗಳಾಗಿದ್ದೆ ಅವರ ಜನಪ್ರಿಯತೆಗೆ ಸಾಕ್ಷಿ. ಸೇವಾ ಸಪ್ತಾಹ ಕಾರ್ಯಕ್ರಮದ ಮೂಲಕ ಮುಂದಿನ ತಿಂಗಳು ಸಾರ್ವಜನಿಕ ಸೇವೆ ಕಾರ್ಯಕ್ರಮ ಮಾಡ್ತೇವೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಲ ತುಂಬುವ ಕೆಲಸ ಮಾಡುತ್ತೇವೆಂದು ಬೊಮ್ಮಾಯಿ ತಿಳಿಸಿದರು.

ಮೋದಿ ಹುಟ್ಟುಹಬ್ಬ ಹಿನ್ನೆಲೆ ಟಿಬಿ ಮುಕ್ತ ಭಾರತಕ್ಕೆ ಚಾಲನೆ ನೀಡಲಿದ್ದಾರೆ. ರಕ್ತದಾನ ಅಮೃತ ಮಹೋತ್ಸವಕ್ಕೂ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸಚಿವ ಸುಧಾಕರ್ ವೈದ್ಯಕೀಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!