Thursday, March 30, 2023

Latest Posts

ಪಕ್ಕದ ಮನೆಯಲ್ಲಿ ಗಂಡು ಮಗು ಜನಿಸಿದರೆ, ಪೇಡ ಇನ್ಯಾರೋ ಹಂಚಿದ್ರಂತೆ: ವಿಪಕ್ಷಗಳಿಗೆ ಸಿಎಂ ಟಾಂಗ್

ಹೊಸದಿಗಂತ ವರದಿ ಹುಬ್ಬಳ್ಳಿ:

ನಿನ್ನೆ ಪ್ರಧಾನಿಯವರಿಂದ ಹಸ್ತದಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕುರಿತು ವಿಪಕ್ಷಗಳು ನಾನಾ ಮಾತುಗಳನ್ನಾಡಿದ್ದವು. ಇದು ಕಾಂಗ್ರೆಸ್‌ನ ಕನಸಿನ ಕೂಸು ಅಂತೆಲ್ಲಾ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ  ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಂತ್ರಿ ಬೊಮ್ಮಾಯಿ ಅವರು ಪಕ್ಕದ ಮನೆಯಲ್ಲಿ ಗಂಡು ಮಗು ಜನಿಸಿದರೆ, ಪೇಡ ಇನ್ಯಾರೋ ಹಂಚಿದ್ರಂತೆ ಹಾಗಾಗಿದೆ ಕತೆ ಎಂದು ಟಾಂಗ್‌ ನೀಡಿದರು.

ಕಾಮಗಾರಿಗಳ ಕ್ರೇಡಿಟ್ ವಿರೋಧ ಪಕ್ಷಗಳು ತೆಗೆದುಕೊಳ್ಳುವುದು ಸಾಮಾನ್ಯ ಅದರಲ್ಲಿ ಎರಡು ಮಾತಿಲ್ಲ. ಅದೇನೋ ಹೇಳ್ತಾರಲ್ಲ ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡ ಹಂಚುವ ಕೆಲಸ ಮಾಡುತ್ತಿದ್ದಾರೆ ಅಂತ ಹಾಗೆಯೇ ಇದು ಕೂಡ. ಕೆಲಸ ನಮ್ಮದಾದರೆ, ಹೇಳಿಕೊಂಡು ಓಡಾಡೋದು ವಿಪಕ್ಷಗಳ ಚಾಳಿ ಎಂದು ಚಾಟಿ ಬೀಸಿದರು.

ಇನ್ನೂ ರಾಜ್ಯದಲ್ಲಿ ಮೋದಿ ಸುನಾಮಿ ಶುರುವಾಗಿದೆ. ಪ್ರಧಾನಿ‌ ರಾಜ್ಯಾದ್ಯಂತ ಪ್ರಚಾರ ಮಾಡಿದ್ದಾರೆ. ಇದರಿಂದ ಮೋದಿ‌ ಹಾಗೂ ಬಿಜೆಪಿ ಪರ ಅಪಾರ ಒಲವು ಜನರು ತೋರಿಸಿದ್ದಾರೆ. ಮೋದಿ ಒಬ್ಬ ಮಹಾನ ನಾಯಕ. ಗಡಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ ಎಂದರು.

ಸಚಿವ ವಿ. ಸೋಮಣ್ಣ ಪಕ್ಷ ಬಿಡಲ್ಲ. ಅವರು ನಮ್ಮ ಜೊತೆಯೇ ಇರುತ್ತಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ಮಾತುಕತೆಯಾಗಿಲ್ಲ. ಅವರ‌ ಮತ್ತು ನಮ್ಮ ಭೇಟಿ ಕೇವಲ ಔಪಚಾರಿಕ ಎಂದು ಸ್ಪಷ್ಟಪಡಿಸಿದರು.

ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕರೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಚಿವರು ಅವರೊಂದಿಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಎಲ್ಲ ವಿವರ ಇಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!