ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ನಾಡನ್ನು ಎಲ್ಲ ರಂಗದಲ್ಲೂ ಸರ್ವ ಶ್ರೇಷ್ಟವಾಗಿ ಕಟ್ಟುವ ಸಂಕಲ್ಪ ಮಾಡೋಣ ಎಂದರು. ಈ ಬಾರಿಯ ದಸರಾ ಹಲವಾರು ವಿಶೇಷತೆಗಳಿಂದ ಕೂಡಿದ್ದು, ಕಳೆದ ಎರಡು ವರ್ಷಗಳಿಗಿಂತ ವಿಭಿನ್ನವಾಗಿ ಗತವೈಭವನ್ನು ಮರುತರುವ ಕೆಲಸ ಮಾಡಲಿದ್ದೇವೆ ಎಂದರು. ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ಈ ನಾಡು ಸುಭಿಕ್ಷವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ಈ ಶಕ್ತಿ ಪೀಠ ಇಡೀ ನಾಡಿಗೆ ಶಕ್ತಿ. ಮೈಸೂರು ಮಹಾರಾಜರ ಕಾಲದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ಈ ತಾಯಿಯ ಆರಾಧನೆ ನಡೆಯುತ್ತಲೇ ಇದೆ.
ಗತಕಾಲದ ವೈಭವದ ಜೊತೆಗ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ದಿ ಅಷ್ಟೇ ಮುಖ್ಯ. ಹತ್ತು ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಜನಕಲ್ಯಾಣದತ್ತ ದಾಪುಗಾಲು ಹಾಕುತ್ತಿದ್ದೇವೆ. ನಮ್ಮ ಆಹ್ವಾನಕ್ಕೆ ಒಪ್ಪಿಗೆ ನೀಡಿ ದ್ರೌಪದಿ ಮುರ್ಮು ರಾಷ್ಟ್ರಪತಿಯಾದ ಬಳಿಕ ದೇಶದಲ್ಲೇ ಭೇಟಿ ನೀಡಿದ ಮೊದಲ ರಾಜ್ಯ ನಮ್ಮದು. ತಾಯಿಯ ದರ್ಶನ ಪಡೆಯೋದು ನನಗೆ ಸಿಕ್ಕಿದ ಪುಣ್ಯ ಎಂದ ಅವರು, ಇಂದು ಮೈಸೂರಿಗೆ ಬಂದು ದಸರಾಗೆ ಚಾಲನೆ ನೀಡಿರುವುದು ನಮಲ್ಲರಿಗೂ ಸಂತಸ ತಂದಿದೆ ಎಂದರು.
ಕನ್ನಡ ನಾಡನ್ನು ಎಲ್ಲ ರಂಗದಲ್ಲೂ ಸರ್ವ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪವನ್ನು ಮಾಡೋಣ. ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ ಕೆಲಸ ಆಗಬೇಕಿದೆ. ಸರ್ವರ ಲೇಸನ್ನು ಬಯಸುವ ಚಿಂತನೆ ನಮ್ಮದಾಗಬೇಕೆಂಬ ಸದ್ಬುದ್ದಿಯನ್ನು ಆ ದೇವಿ ನಮಗೆ ನೀಡಲಿ. ನಮ್ಮ ನಾಡನ್ನು ಇನ್ನಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ತಾಯಿ ನಮ್ಮೆಲ್ಲರನ್ನು ಆಶೀರ್ವಾದ ಮಾಡುತ್ತಾಳೆ ಎಂದರು.