ಹೊಸದಿಗಂತ ವರದಿ,ಹಾವೇರಿ :
ರಾಜ್ಯದಲ್ಲಿ ವ್ಯಾಪಕವಾಗಿ ಜಾಣುವಾರುಗಳಲ್ಲಿ ಹರಡುತ್ತಿರುವ ಗಂಟುರೋಗದಿಂದ ಮೃತಪಟ್ಟ ರಾಸುಗಳಿಗೆ ೨೦ ಹಾಗೂ ಎತ್ತುಗಳಿಗೆ ೩೦ ಸಾವಿರ ರೂ.ಗಳ ಪರಿಹಾರ ಒದಗಿಸಲಾಗುವುದು ಮತ್ತು ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಜಿಲ್ಲೆಯ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಕೆಎಂಎಫ್ ಮೆಗಾಡೈರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ದನಕರುಗಳಿಗೆ ಗಂಟು ರೋಗ ಕಂಡುಬಂದಿದೆ. ಗಂಟುರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಅದಕ್ಕೆ ಈಗಾಗಲೇ ಸೂಚನೆ ನೀಡಿ ವಿಶೇಷ ತಂಡವನ್ನು ಕಳಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ರೈತರ ಪಂಪ್ಸೆಟ್ಗಳಿಗೆ ಐದು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಆಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಬೆಂಗಳೂರಿಗೆ ತೆರಳಿದ ನಂತರ ಸಮಾಲೋಚನೆ ಮಾಡಿ ಇದನ್ನು ಏಳು ಗಂಟೆಗಳಿಗೆ ವಿಸ್ತರಿಸುವುದಕ್ಕೆ ಕ್ರಮ ಜರುಗಿಸಲಾಗುವುದು. ವಿದ್ಯುತ್ ಸಂಸ್ಥೆಗಳ ಖಾಸಗೀಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದರು.