ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದು, ‘ಆತನಿಗೆ ರಾಜಕೀಯ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾನೆ’ ಎಂದಿದ್ದಾರೆ.
‘ಬಿಜೆಪಿಯ ಕೆಲ ಮಹಾನ್ ನಾಯಕರು ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಹಾಗಾಗಿ ಹಗರಣಗಳ ತನಿಖೆ ನಡೆಸಲು ಯಾರೂ ಮುಂದಾಗಿಲ್ಲ. ಸಿದ್ದರಾಮಯ್ಯ ವಿರುದ್ಧ ರೀಡೂ, ಅರ್ಕಾವತಿ ಡಿನೋಟಿಫೀಕೇಷನ್, ಕೆಂಪಣ್ಣ ಆಯೋಗ ವರದಿ ಇದೆ ಎಂದು ನಮ್ಮ ಹಿರಿಯ ನಾಯಕರು ಅಬ್ಬರಿಸುತ್ತಿದ್ದರು. ಆದರೆ ಈ ಬಗ್ಗೆ ವಿಧಾನಸಭೆ ಹೊರಗೂ-ಒಳಗೂ ಸಮರ್ಥವಾಗಿ ಮಂಡನೆ ಮಾಡಲಿಲ್ಲ’ ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ‘ಪ್ರತಾಪ್ ಸಿಂಹ ಹೇಳಿದ ತಕ್ಷಣ ತನಿಖೆ ಮಾಡಿಸೋದಕ್ಕಾಗುತ್ತಾ? ಆರೋಪ ಬಂದಿದ್ದಾಗ ತನಿಖೆ ಮಾಡಿ ಅಂತ ಅವತ್ತು ಹೇಳಿದ್ನಾ? ಯಾವಾಗ ತನಿಖೆ ಮಾಡಿಸಬೇಕು, ಯಾರಿಂದ ತನಿಖೆ ಮಾಡಿಸಬೇಕು ಅಂತ ನಮಗೆ ಗೊತ್ತಿದೆ. ಬಿಜೆಪಿಯಲ್ಲಿ ಯಾರು ಹೊಂದಾಣಿಕೆ ರಾಜಕೀಯ ಮಾಡುವವರು ಅಂತ ಆತನೇ ಬಹಿರಂಗಪಡಿಸಲಿ’ ಎಂದರು.
ನನ್ನ ರಾಜಕೀಯ ಜೀವನದಲ್ಲಿ ನಾನು ವಿಪಕ್ಷ ನಾಯಕರೊಂದಿಗೆ ಮಾತನಾಡುವುದಿಲ್ಲ. ಅವರ ಮನೆಗೂ ಹೋಗುವುದಿಲ್ಲ. ಅವರೇ ಏನಾದರೂ ಬಂದರೆ ಸೌಜನ್ಯಕ್ಕೆ ಮಾತನಾಡುತ್ತೇನೆ ಹೊರತು ರಾಜಕೀಯ ಮಾತನಾಡುವುದಿಲ್ಲ. ನಾನಾಗಿ ನಾನೇ ವಿರೋಧ ಪಕ್ಷದವರಿಗೆ ಫೋನ್ ಕೂಡ ಮಾಡಲ್ಲ. ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತಾಡ್ತಾನೆ. ಕಾಂಗ್ರೆಸ್, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.