ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣದ ಮೀನುಗಾರಿಕಾ ಬಂದರಿನಲ್ಲಿ ಬೋಟ್ಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣವೇನು ಎಂಬುದನ್ನು ತಿಳಿಯಲು ಆಳವಾದ ತನಿಖೆ ನಡೆಸುವಂತೆ ಸಿಎಂ ಜಗನ್ ಆದೇಶಿಸಿದರು. ಅಲ್ಲದೆ ಬೋಟ್ ಕಳೆದುಕೊಂಡಿರುವ ಮೀನುಗಾರರ ಬೆಂಬಲಕ್ಕೆ ನಿಂತು ಅವರಿಗೆ ಸೂಕ್ತ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ನಡುವೆ ವಿಶಾಖದ ಮೀನುಗಾರಿಕಾ ಬಂದರಿನಲ್ಲಿ ಮಧ್ಯರಾತ್ರಿ ಸಂಭವಿಸಿದ ಭಾರೀ ಬೆಂಕಿ ಮೀನುಗಾರರ ಪಾಲಿಗೆ ತೀವ್ರ ದುರಂತ ಎಂದೇ ಹೇಳಬಹುದು. ಮೀನುಗಾರರೆಲ್ಲರೂ ಗಾಢ ನಿದ್ದೆಯಲ್ಲಿದ್ದ ವೇಳೆ ಸಂಭವಿಸಿದ ಭೀಕರ ಬೆಂಕಿ ಗಂಗಾಪುತ್ರನಿಗೆ ಕರಾಳ ರಾತ್ರಿಯಾಗಿ ಪರಿಣಮಿಸಿದೆ. ಒಂದಲ್ಲ, ಎರಡಲ್ಲ, ಸುಮಾರು 50 ದೋಣಿಗಳು ಸುಟ್ಟು ಕರಕಲಾಗಿವೆ. ಈ ಅಪಘಾತದಲ್ಲಿ 40 ಕೋಟಿ ರೂ.ಗಳ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಜೀವನಾಧಾರವಾದ ದೋಣಿಗಳು ಕಣ್ಣೆದುರೇ ಬೆಂಕಿಗೆ ಆಹುತಿಯಾಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ಅಳಲು ತೋಡಿಕೊಂಡರು.
ಬೆಂಕಿ ಅವಘಡದಲ್ಲಿ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಫಿಶಿಂಗ್ ಹಾರ್ಬರ್ ನಲ್ಲಿ ಯೂಟ್ಯೂಬರ್ ಪಾರ್ಟಿ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿ ಗಲಾಟೆ ನಡೆಯಿತು ಎಂದು ಹೇಳಲಾಗುತ್ತಿದೆ. ಸದ್ಯ ಯೂಟ್ಯೂಬರ್ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಮೂರು ತಂಡಗಳನ್ನು ನೇಮಿಸಲಾಗಿದೆ.