ಹೊಸದಿಗಂತ ವರದಿ ಮಡಿಕೇರಿ:
ಅಕಾಲಿಕವಾಗಿ ಕಾಣಿಸಿಕೊಂಡಿರುವ ಮಳೆಗೆ ಕೊಡಗು ಜಿಲ್ಲೆಯಲ್ಲಿ ಹಲವು ಆತಂಕ ಹುಟ್ಟುಹಾಕಿದೆ.
ಕೊಡಗಿನಲ್ಲಿ ಇದು ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಮೋಡದ ವಾತಾವರಣ, ತುಂತುರು ಮಳೆ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಚಳಿಯೂ ಮನೆ ಮಾಡಿದೆ.
ಗ್ರಾಮೀಣ ಪ್ರದೇಶದ ಹಲವೆಡೆ ಈಗಾಗಲೇ ಕಾಫಿ ಕೊಯ್ಲು ಆರಂಭಗೊಂಡಿದ್ದು, ಬಿಸಿಲಿನ ಕೊರತೆಯಿಂದ ರೈತರು ಕಾಫಿ ಹಣ್ಣನ್ನು ಒಣಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ತುಂತುರು ಮಳೆ ಬೆಳೆಗಾರರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ಕಾಡಿದೆ ಕಾಫಿ ನೀರು ಪಾಲಾಗುವ ಆತಂಕ
ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಬಳಸಿದ ತೋಟಗಳಲ್ಲಿನ ಬಹುತೇಕ ಕಾಫಿ ಹಣ್ಣಾಗಿದ್ದು, ಕೊಯ್ಲು ಮಾಡಿದ ಕಾಫಿಯನ್ನು ಬೆಳೆಗಾರರು, ಮನೆಯಂಗಳ, ಕಾಫಿ ಕಣ, ಭತ್ತದ ಗದ್ದೆಗಳು, ಮೈದಾನ, ಹುಲ್ಲು ಗಾವಲು ಗಳಲ್ಲಿ ಒಣಗಿಸುತ್ತಿದ್ದಾರೆ. ಒಂದು ವೇಳೆ ಭಾರೀ ಮಳೆಯಾದರೆ ಈ ಕಾಫಿ ನೀರು ಪಾಲಾಗುವ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಮಳೆಯಿಂದಾಗಿ ಕಾಫಿ ಬೀಜದ ಗುಣಮಟ್ಟ ಕುಸಿಯುವ ಭೀತಿಯೂ ಎದುರಾಗಿದೆ.