ಹೊಸ ದಿಗಂತ ವರದಿ, ಮಡಿಕೇರಿ :
ಕಾಫಿ ಬೆಳೆಗಾರರೊಬ್ಬರ ಮನೆಗೆ ನುಗ್ಗಿದ ಚೋರರು ನಗದು ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಸೋಮವಾರಪೇಟೆಯ ಬಾಣಾವರ ರಸ್ತೆಯಲ್ಲಿ ನಡೆದಿದೆ.
ಬಾಣಾವರ ರಸ್ತೆ ನಿವಾಸಿ ಕಾಫಿ ಬೆಳೆಗಾರ ಎನ್.ಎನ್.ರಮೇಶ್ ಹಾಗೂ ಕುಟುಂಬದವರು ಏ.26 ರಂದು ಸಂಬಂಧಿಕರ ಮನೆಗೆಂದು ಬೆಂಗಳೂರಿಗೆ ಹೋಗಿದ್ದರು. ಆದರೆ ಮೇ 3 ರಂದು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ರಮೇಶ್ ಅವರ ಸಹೋದರ ಪವರ್ಹೌಸ್ ರಸ್ತೆ ನಿವಾಸಿ ರಾಮಪ್ರಸಾದ್ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಮನೆಯನ್ನು ಪರಿಶೀಲಿಸಿದಾಗ ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಚಿನ್ನದ ಓಲೆ, ಒಂದು ಜೊತೆ ಮುತ್ತಿನ ಓಲೆ, ನಗದು ಹಣ ಅಪಹರಿಸಿದ್ದಾರೆ. ಈ ಕುರಿತು ರಮೇಶ್ ಅವರು ನೀಡಿದ ದೂರಿನನ್ವಯ ಸೋಮವಾರಪೇಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೆಚ್ಚಾಯ್ತು ಕಳ್ಳತನ
ಇತ್ತೀಚಿನ ದಿನಗಳಲ್ಲಿ ಸೋಮವಾರಪೇಟೆ ಪಟ್ಟಣದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಚೋರರ ಬಂಧನವಾಗುತ್ತಿಲ್ಲ. 2 ತಿಂಗಳ ಹಿಂದೆ ಪಟ್ಟಣದ ಉದ್ಯಮಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಹಾಡಹಗಲೇ ದರೋಡೆಯಾಗಿದೆ. ಈ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದರೂ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಕಾಫಿ ಡಿಪೋ ಮಾಲೀಕರೊಬ್ಬರ ಕಚೇರಿಯ ಕಪಾಟಿನಿಂದ ಹಣ ಲಪಟಾಯಿಸಿದ ಪ್ರಕರಣವೂ ನಡೆದಿತ್ತು. ಆದರೆ ಯಾವುದೇ ಪ್ರಕರಣಗಳ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.