ಹೊಸದಿಗಂತ ವರದಿ ಮಡಿಕೇರಿ:
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ (2015ರ ನ.10) ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಗಲಭೆಯಲ್ಲಿ ಸಾವಿಗೀಡಾದ ಹಿಂದೂ ಮುಖಂಡ ದೇವಪಂಡ ಕುಟ್ಟಪ್ಪ ಅವರ ಪುಣ್ಯಸ್ಮರಣೆಯನ್ನು ಕೊಡಗಿನ ವಿವಿಧೆಡೆ ಗುರುವಾರ ಮಾಡಲಾಯಿತು.
ಕುಟ್ಟಪ್ಪ ಅವರ ಊರಾದ ಮಾದಾಪುರದಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ ಗಣರಾಜ್ ಭಟ್, ಮತಾಂಧರ ಪಿತೂರಿಗಳ ಬಗ್ಗೆ ಹಿಂದೂ ಸಮಾಜ ಜಾಗೃತಗೊಳ್ಳಬೇಕೆಂದು ಕರೆ ನೀಡಿದರು.
ಹಿಂದೂ ಧರ್ಮ ಮತ್ತು ದೇಶಕ್ಕಾಗಿ ಕುಟ್ಟಪ್ಪ ಅವರು ಬಲಿದಾನಗೈದಿದ್ದಾರೆ. ಇಂದು ಸಮಾಜದಲ್ಲಿ ಲವ್ ಜಿಹಾದ್ ಪಿಡುಗು ಹೆಮ್ಮರವಾಗಿ ಬೆಳೆಯುತ್ತಿದೆ. ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಗೋವುಗಳ ಹತ್ಯೆಯಾಗುತ್ತಿದೆ. ಗೋಮಾಳಗಳ ಸಂರಕ್ಷಣೆಗೆ ಆಡಳಿತ ವ್ಯವಸ್ಥೆ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಶ್ರೀ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಕುಟ್ಟಪ್ ಅವರ ಪುತ್ರ ಡಾಲಿ, ಪ್ರಮುಖರಾದ ಮಹೇಶ್ ಕಡಗದಾಳು ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವೇದಿಕೆಯ ಪ್ರಮುಖರು ಹಾಗೂ ಕಾರ್ಯಕರ್ತರು ಕುಟ್ಟಪ್ಪ ಅವರ ಹೆಸರಿನಲ್ಲಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪೊನ್ನಂಪೇಟೆ ವರದಿ: ಕೊಡಗು ಯುವ ಸೇನೆ ವತಿಯಿಂದ ಪೊನ್ನಂಪೇಟೆಯ ಬಸವೇಶ್ವರ ದೇವಾಲಯದಲ್ಲಿ ದಿವಂಗತ ಕುಟ್ಟಪ್ಪ ಅವರ ಹೆಸರಿನಲ್ಲಿ ಶಾಂತಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಸೇನೆಯ ಮುಖಂಡ ಕುಲ್ದೀಪ್ ಪೂಣಚ್ಚ , ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಪ್ರಮುಖರಾದ ಪಡೆಯಂಡ ರೋಶನ್, ಚೋಕಿರ ಕೆ.ಅಯ್ಯಪ್ಪ , ಶಿದಿನ್ ದಾಸ್, ಚೋಕಿರ ಅಪ್ಪಿ ಪ್ರವೀಣ್, ಚೋಕಿರ ಪೂವಣ್ಣ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.