ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ದಿವ್ಯಾ ಕಕ್ರನ್, ದೆಹಲಿ ಸರ್ಕಾರ ಹಾಗು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಪಾದನೆಗಳನ್ನು ಮಾಡಿದ್ದಾರೆ.
2017ರಲ್ಲಿ ಏಷ್ಯಾ ಗೇಮ್ಸ್ನಲ್ಲಿ ನಾನು ದೆಹಲಿ ಪ್ರತಿನಿಧಿಸಿ ಪದಕ ಗೆದ್ದಿದ್ದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ. ಸಹಾಯಕ್ಕಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದರೆ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಹೀಗೆ ಪತ್ರ ನೀಡಿದ ಬಳಿಕ ಹಿಂತಿರುಗಿಯೂ ನೋಡಲಿಲ್ಲ. ಯಾವುದೇ ರೀತಿಯ ಧನ ಸಹಾಯವನ್ನೂ ಮಾಡಲಿಲ್ಲ ಎಂದು ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, 2017ರ ಹೊತ್ತಿಗೆ ದೆಹಲಿಗೋಸ್ಕರ 58 ಪದಕಗಳನ್ನು ಗೆದ್ದಿದ್ದೇನೆ. ನಾನು ಅತ್ಯಂತ ಬಡ ಕುಟುಂಬದಿಂದ ಬಂದವಳು. ಕ್ರೀಡಾಕೂಟದ ಸಲುವಾಗಿ ದೂರ ಪ್ರಯಾಣಕ್ಕೆ ನನ್ನ ಬಳಿ ಹಣವೂ ಇರಲಿಲ್ಲ. ರೈಲಿನ ಶೌಚಾಲಯದ ಪಕ್ಕದಲ್ಲಿಯೇ ಕುಳಿತು ಪ್ರಯಾಣಿಸಿದ್ದಿದೆ.
ಇದರಿಂದ ನೊಂದು ಕೊನೆಗೆ, 2018ರಿಂದ ಉತ್ತರ ಪ್ರದೇಶಕ್ಕಾಗಿ ಸ್ಪರ್ಧಿಸಲು ಪ್ರಾರಂಭಿಸಿದೆ. 2019ರಲ್ಲಿ ಯುಪಿ ಸರ್ಕಾರ ನನಗೆ ರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿ ನೀಡಿತು. 2020ರಲ್ಲಿ ಜೀವಿತಾವಧಿ ಪಿಂಚಣಿಯನ್ನೂ ಕೊಟ್ಟರು. ನಿನ್ನೆಯಷ್ಟೇ 50 ಲಕ್ಷ ರೂಪಾಯಿ ಮತ್ತು ಗೆಜೆಟೆಡ್ ಅಧಿಕಾರಿ ಶ್ರೇಣಿಯ ಹುದ್ದೆ ಘೋಷಣೆ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡರು.