ದಿಗಂತ ವರದಿ ನಾಪೋಕ್ಲು:
ಜೊತೆಗಾರರಿಬ್ಬರು ಒಂದೇ ದಿನ ಸಾವಗೀಡಾದ ಘಟನೆ ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಟ್ಟಚೆರುವಂಡ ಗಣಪತಿ ಎಂಬವರ ಲೈನ್ ಮನೆಯಲ್ಲಿ ಕಾರ್ಮಿಕನಾಗಿದ್ದ ಪೌಲೋಸ್ ಎಂಬಾತ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ನೇಣಿಗೆ ಕೊರಳೊಡ್ಡಿದ್ದರೆ, ಆತನ ಜೊತೆಗಾರ ಮಲಗಿದ್ದಲ್ಲೇ ಸಾವಿಗೀಡಾಗಿರುವುದು ಗೋಚರಿಸಿದೆ.
ಪೌಲೋಸ್ ಕಳೆದ 3-4 ವರ್ಷಗಳಿಂದ ಈ ವಿಭಾಗದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಕಳೆದ ಒಂದು ತಿಂಗಳಿಂದ ಚೇಲಾವರದ ಪಟ್ಟಚೆರುವಂಡ ಗಣಪತಿ ಅವರ ಲೈನ್ ಮನೆಯಲ್ಲಿ ವಾಸವಾಗಿದ್ದ.
ವಕೀಲರಾಗಿರುವ ಗಣಪತಿ ಅವರು ಮಡಿಕೇರಿಯಲ್ಲಿ ವಾಸವಾಗಿದ್ದು, ಅವರ ಮಗ ತೋಟಕ್ಕೆ ಬಂದು ಲೈನ್ ಮನೆಯಲ್ಲಿದ್ದ ಪೌಲೋಸ್ನನ್ನು ನೋಡಲು ಹೋದಾಗ ಆತ ಕಾಣಿಸಲಿಲ್ಲ. ಬಳಿಕ ಕಾಫಿ ತೋಟದಲ್ಲಿ ನೋಡಿದಾಗ ನೇಣಿಗೆ ಕೊರಳೊಡ್ಡಿರುವುದು ಗೋಚರಿಸಿದೆ.
ಮತ್ತೊಂದೆಡೆ ಇವರ ಲೈನ್ ಮನೆಯ ಹತ್ತಿರವೇ ಇದ್ದ ಪೌಲೋಸ್’ನ ಜೊತೆಗಾರ ಮಲಗಿದ್ದಲ್ಲೇ ಸಾವನ್ನಪ್ಪಿದ್ದುದಾಗಿ ಹೇಳಲಾಗಿದೆ.
ಈ ಬಗ್ಗೆ ಗಣಪತಿ ಅವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ, ಎ.ಎಸ್.ಐ. ಕುಶಾಲಪ್ಪ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.