ದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ಹುಲಿಯ ಅಟ್ಟಹಾಸ ಮುಂದುವರಿದಿದ್ದು, ಗಬ್ಬದ ಹಸುವನ್ನು ಕೊಂದು ತಿಂದಿರುವ ಘಟನೆ ವೀರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.
ಮನೆಯಪಂಡ ಮೊಣ್ಣಪ್ಪ ಎಂಬವರಿಗೆ ಸೇರಿದ ಹಸುವನ್ನು ಬಲಿ ಪಡೆದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಹಸುವನ್ನು ಭಕ್ಷಿಸುತ್ತಿದ್ದ ದೃಶ್ಯ ಗೋಚರಿಸಿದೆ.
ಹುಲಿಯನ್ನು ನೋಡಿ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಭಯದಿಂದ ಹಿಂದಕ್ಕೆ ತೆರಳಿದ್ದು, ಹುಲಿ ತೆರಳಿದ ಬಳಿಕ ಸ್ಥಳದಲ್ಲಿ ಬೋನ್ ಅಳವಡಿಸಲಾಗಿದೆ.
ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣ ಆಗಿಂದಾಗ್ಗೆ ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.