ಹೊಸದಿಗಂತ ವರದಿ ಗದಗ :
ಮೈಸೂರಲ್ಲಿ ಟಿಪ್ಪು ಮೂರ್ತಿ ನಿರ್ಮಾಣ ಮಾಡಿದರೆ ಜನ ನಿರ್ಧಾರ ಮಾಡುತ್ತಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತ್ಯ ಹೇಳುವುದನ್ನು ಸಹಿಸಲ್ಲ, ಸುಳ್ಳಿನ ಆಧಾರದಲ್ಲಿ ಕೆಲವರು ತಜ್ಞರಾಗಿದ್ದಾರೆ. ಸುಳ್ಳು ಹೇಳಿಕೊಂಡೇ ಕೆಲ ರಾಜಕೀಯ ಪಕ್ಷಗಳು ಬದುಕಿವೆ. ನಿಜ ಹೊರ ಬರುವದರಿಂದ ಕೆಲವರ ಭವಿಷ್ಯಕ್ಕೆ ಕುತ್ತಾಗುತ್ತೆ. ದೇಶಕಂಡ ಅತ್ಯಂತ ಶ್ರೇಷ್ಠವ್ಯಕ್ತಿಗಳಲ್ಲಿ ಟಿಪ್ಪುವಿನ ಬಗ್ಗೆ ಓದಿದ್ದೆವು. ಆದರೆ, ಈಗ ಸತ್ಯ ಗೊತ್ತಾಗುತ್ತಿದೆ. ಶ್ರೀರಂಗಮಟ್ಟಣದ ಆಂಜನೇಯ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಗೊತ್ತಾಯಿತು. ಪಹಣಿ, ಶಿರಸ್ತೆದಾರ ಅಂದರೆ ಕನ್ನಡದ ಪದ ಅಂದುಕೊಂಡಿದ್ದೆವು. ಪಹಣಿಯಲ್ಲಿ ಇರುವುದು ಪರ್ಷಿಯನ್ ಪದ ಎಂದು ಗೊತ್ತಾಯಿತು.
ಕನ್ನಡವನ್ನು ಕೊಂದಿದ್ದು, ಕೊಡಗು, ಕೇರಳದಲ್ಲಿ ಬಲವಂತವಾಗಿ ಮತಾಂತರ ಮಾಡಿದ್ದು, ಮತಾಂತರಕ್ಕೆ ಒಪ್ಪದಿರುವರನ್ನು ಕೊಲೆ ಮಾಡಿದ್ದಾನೆ ಎನ್ನುವುದು ಟಿಪ್ಪುಸುಲ್ತಾನ್ ಬರೆದ ಪತ್ರದ ಮೂಲಕವೇ ಗೊತ್ತಾಗುತ್ತಿದೆ ಎಂದರು.
ಈ ದೇಶದಲ್ಲಿ ಟಿಪ್ಪುನನ್ನು ಕೆಂಪೇಗೌಡರಿಗೆ ಹೋಲಿಸಲಾಗುತ್ತಿರುವುದು ದುರಾದೃಷ್ಟ. ಕೆಂಪೇಗೌಡರು ಎಲ್ಲರೂ ಚೆನ್ನಾಗಿರಬೇಕು ಎಂದು ಕೆಲಸ ಮಾಡಿದವರು. ದೇಶ ಇನ್ನೂ ೧೦೦ ವರ್ಷದ ನಂತರ ಹೇಗಿರಬೇಕು ಎಂದು ಕನಸು ಕಂಡವರು. ಆದರೆ ಟಿಪ್ಪುಸುಲ್ತಾನ್ ಏನು ಮಾಡಿದ್ದಾನೆ ಎಂದು ತಿಳಿದಿದ್ದರೂ ಜನ ಆತನ ಬಗ್ಗೆ ಹೊಗಳುತ್ತಾರೆ ಎಂದರೆ ಅವರ ಮಾನಸಿಕತೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಚಾಟಿ ಬೀಸಿದರು.
ವಿವೇಕ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಕುರಿತು ಮಾತನಾಡಿದ ಸಚಿವರು ಕೇಸರಿ ಬಣ್ಣ ಚೆನ್ನಾಗಿದೆ ಎಂದು ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಹಾಕಿಸುತ್ತೇನೆ. ಬಣ್ಣ, ಕಿಟಕಿಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ ಅದನ್ನು ಆರ್ಕಿಟೆಕ್ಟ್ ಮೇಲೆ ಬಿಡುತ್ತೆವೆ. ಅವರು ಕೊಡುವ ಡಿಸೈನ್ ಮೇಲೆ ನಾವು ಡಿಸೈಡ್ ಮಾಡುತ್ತೇವೆ. ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೆಸರಿ ಇದೆ. ಅದನ್ನು ಯಾಕೆ ಇಟ್ಕೊಂಡಿದಾರೆ, ಅದನ್ನು ಪೂರ್ತಿ ಹಸಿರು ಮಾಡಿಕೊಂಡುಬಿಡಿ ಎಂದು ಹೆಸರು ಹೇಳದೇ ಕಾಂಗ್ರೆಸ್ಗೆ ಕಾಲೆಳೆದರು.