ಹೊಸ ದಿಗಂತ ವರದಿ, ವಿಜಯಪುರ:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಮತದಾನ ಮಾಡದೇ, ಈ ಬಾರಿ ಸಂಪೂರ್ಣವಾಗಿ ಬಿಜೆಪಿ ಸರ್ಕಾರ ರಚನೆಗೊಳ್ಳುವ ನಿಟ್ಟಿನಲ್ಲಿ ಮತದಾರರು ಬೆಂಬಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಪರ ಚುನಾವಣೆ ಪ್ರಚಾರ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ಸರ್ಕಾರವಾದರೆ, ಇನ್ನು ಕಾಂಗ್ರೆಸ್ನವರದು ರಿವರ್ಸ್ ಗೇರ್ ಸರ್ಕಾರವಾಗಿದ್ದು, ನಾವು ಅಭಿವೃದ್ಧಿ ಮಾಡುತ್ತ ಹೋದರೆ, ಅವರು ರಿವರ್ಸ್ ಗೇರ್ ಹಾಕುತ್ತ ಹೋಗುತ್ತಾರೆ ಎಂದು ದೂರಿದರು.
ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸೋಮನಗೌಡ ಪಾಟೀಲ ಸಾಸನೂರ ಅವರನ್ನು ಗೆಲ್ಲಿಸುವುದರ ಜೊತೆಗೆ, ಬಿಜೆಪಿ ಬಹುಮತದಿಂದ ಗೆಲ್ಲಬೇಕು ಎಂದು ಮನವಿ ಮಾಡಿದರು.
ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬರಲ್ಲ. ಆದರೆ ಮುಸ್ಲಿಂರಿಗಾಗಿ ಕಾಂಗ್ರೆಸ್ ಸರ್ಕಾರ ಮೀಸಲಾತಿ ಮಾಡಿದ್ದರು.
ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ, ತಮ್ಮ ಸರ್ಕಾರ ಬಂದಾಗ ಮತ್ತೆ ಮುಸ್ಲಿಂರಿಗೆ ಮರಳಿ ಮೀಸಲಾತಿ ಕೊಡತ್ತೇನೆ ಎನ್ನುತ್ತಾರೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ, ಎಲ್ಲ ಪಿಎಫ್ಐ ಅವರನ್ನು ಬಿಟ್ಟಿದ್ದರು. ಆದರೆ ನಾವು ಮತ್ತೆ ಮರಳಿ ಅವರಿಗೆ ಹುಡುಕಿ ಹುಡುಕಿ ಜೈಲಿಗೆ ಕಳಿಸಿದೆವು. ಈ ಪಿಎಫ್ಐನವರು ದೇಶಕ್ಕೆ ಮಾರಕವಾಗಿದ್ದಾರೆ. ಇಂತವರಿಗೆ ನಾವು ಹುಡುಕಿ ಹುಡುಕಿ ಜೈಲಿಗೆ ಹಾಕಿದ್ದೇವೆ ಎಂದರು.
ಧರ್ಮಾಂತರ ಮಾಡುವುದನ್ನು ನಿಲ್ಲಿಸಿರುವುದು ಭಾರತೀಯ ಜನತಾ ಪಾರ್ಟಿ. ಕಾಂಗ್ರೆಸ್ ನವರಿಗೆ ಧಮ್ ಇದ್ದರೆ, ನಿಮ್ಮ ಸರ್ಕಾರ ಏನೇನು ಕೆಲಸ ಮಾಡಿದೆ ? ವಿಜಯಪುರ ಜಿಲ್ಲೆಯ ಜನರ ಮುಂದೆ ಇಡಬೇಕು ಎಂದು ಸವಾಲ್ ಹಾಕಿದರು.
ರಾಮಮಂದಿರ ನಿರ್ಮಾಣಕ್ಕೆ ಅಡೆತಡೆ ಉಂಟು ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ನಡೆದಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ ಈ ಕಾಂಗ್ರೆಸ್ ಪಕ್ಷ ಎಂದಿಗೂ ನಮ್ಮ ಸಾಂಸ್ಕೃತಿಕ ಸ್ಥಳಗಳ ಅಭಿವೃದ್ಧಿ ಮಾಡಲ್ಲ ಎಂದರು.
ನಮ್ಮ ಇಬ್ಬರು ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದಕ್ಕೆ ಅವರು ಗೆಲ್ಲುತ್ತಾರೆ ಅಂತ ತಿಳಿದಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ 25,000 ಮತಗಳಿಂದ ಅವರು ಸೋಲು ಅನುಭವಿಸಬೇಕಾಗುತ್ತದೆ. ಈ ಬಾರಿ ವಿಜಯಪುರ ಜಿಲ್ಲೆಯ 8 ಮತಕ್ಷೇತ್ರಗಳ ಪೈಕಿ 7 ಮತಕ್ಷೇತ್ರದಲ್ಲಾದರೂ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎಂದರು.