ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ ಇರುವ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಜನತೆ ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಚಳ್ಳಕೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ರೋಡ್ ಷೋದಲ್ಲಿ ಭಾಗವಹಿಸಿದ ಅವರು, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಹೈವೇ ಸೇರಿದಂತೆ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ವಿಮಾನನಿಲ್ದಾಣ ಉದ್ಘಾಟನೆ ಮಾಡಲಾಗಿದೆ. ವಿದೇಶಿ ನೇರ ಹೂಡಿಕೆ (ಎಫ್ಡಿಐ) ವಿಚಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ಗಮನ ಸೆಳೆದರು.
ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರರದ ಪಕ್ಷ, ಕಾಂಗ್ರೆಸ್ ಪರಿವಾರದ ಪಕ್ಷ. ಆದರೆ, ಬಿಜೆಪಿ ಜನಪರ ಪಕ್ಷ ಎಂದು ವಿವರಿಸಿದ ಅವರು, ಕಾಂಗ್ರೆಸ್ಸಿನ ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದು ಕುಣಿಯಲು ಬಾರದವರು ನೆಲ ಡೊಂಕು ಎನ್ನುವ ಹಾಗೆ ರಾಹುಲ್ ಗಾಂಧಿಯ ಪರಿಸ್ಥಿತಿಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ನವರು ರಾಜಕೀಯದಲ್ಲಿ ತಮಾಷೆ ಮಾಡುತ್ತಿದ್ದಾರೆ ಮತ್ತು ಮುಂದೆ ತಮಾಷೆಯ ವಸ್ತು ಆಗಲಿದ್ದಾರೆ ಎಂದರು. ನೆನಪಿರಲಿ ರಾಹುಲ್ ಗಾಂಧಿ ನಿಮ್ಮ ಅಜ್ಜಿ ಈ ದೇಶಕ್ಕೆ ಪ್ರಧಾನಿಯಾಗಿದ್ದರು; ಅಲ್ಲದೆ ತುರ್ತು ಪರಿಸ್ಥಿತಿ ಹೇರಿ ದೇಶಕ್ಕೆ ಬೀಗ ಹಾಕಿದ್ದರು ನಿಮ್ಮ ಅಜ್ಜಿ ಎಂದು ಗಮನ ಸೆಳೆದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ನಾರಾಯಣಸ್ವಾಮಿ, ರಾಜ್ಯದ ಸಚಿವ ಆರ್. ಅಶೋಕ್, ರಾಜ್ಯ ಕಾರ್ಯದರ್ಶಿ ಕೆಎಸ್ ನವೀನ್, ಯಾತ್ರೆ ಸಂಚಾಲಕ ಸಚ್ಚಿದಾನಂದ ಮೂರ್ತಿ, ಜಿಲ್ಲಾ ಅಧ್ಯಕ್ಷ ಮುರುಳಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.