ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪಯಾತ್ರೆ ಶುಕ್ರವಾರ ವಾಣಿಜ್ಯ ನಗರಿ ಹುಬ್ಬಳ್ಳಿ ಪ್ರವೇಶಿಸಿತು. ನಗರದ ಮೂರು ಸಾವಿರಮಠದಲ್ಲಿ ಹು-ಧಾ ಪೂರ್ವ ವಿಧಾನ ಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಿದ್ದ ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಚಾಲನೆ ನೀಡಿದರು.
ಸಾವಿರಾರೂ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಲಾ ತಂಡಗಳಾದ ಜ್ಯಾಂಜ್ ಮೇಳ, ಗೊಂಬೆ ಕುಣಿತ, ಡಿಜೆ ಮೂಲಕ ಬಿಜೆಪಿ ಬಿಜೆಪಿ ಎಂಬ ಗೀತೆ ಸದ್ದು ಮಾಡಿತು.
ಯುವಕರು, ಮಹಿಳೆಯರು, ಪುರುಷರು ಸೇರಿದಂತೆ ರಥಯಾತ್ರೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನಗೊಳಿಸಿದರು.
ರಥಯಾತ್ರೆ ದಾಜಿಬಾನಪೇಟೆ, ತುಳಜಾಭವಾನಿ, ಪೆಂಡರ್ ಗಲ್ಲಿ ವೃತ್ತ ಮೂಲಕ ಸಾಗಿತು. ರಸ್ತೆ ಇಕ್ಕಲಲ್ಲಿ ನಿಂತಿದ್ದ ಜನರು ಬಿಜೆಪಿ ನಾಯಕರಿಗೆ ಕೈ ಬಿಸಿ ರಥ ಸ್ವಾಗತಿಸಿದರು.
ಮುಸ್ಲಿಂ ಬಾಂಧವರಿಂದ ಪುಷ್ಪವೃಷ್ಠಿ: ರಥಯಾತ್ರೆ ತುಳಜಾಭವಾನಿ ವೃತ್ತಕ್ಕೆ ಆಗಮಿಸುತ್ತಿದಂತೆ ಮುಸ್ಲಿಂ ನಾಯಕರು ಕಾರ್ಯಕರ್ತರ ಮೇಲೆ ಪುಷ್ಪವೃಷ್ಠಿ ಮಾಡಿದರು. ಕಾರ್ಯಕರ್ತ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಮೋದಿ ಮೋದಿ ಘೋಷಣೆ: ರಥಯಾತ್ರೆ ಸಾಗುತ್ತಿದ್ದರೆ ಇತ್ತ ಕಾರ್ಯಕರ್ತರು ಮೋದಿ, ಮೋದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ ಜೈಯವಾಗಲಿ ಎಂಬ ಘೋಷಣೆ ಕೂಗಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಪೂರ್ವ ಕ್ಷೇತ್ರದ ಮುಖಂಡರಾದ ಡಾ. ಕ್ರಾಂತಿ ಕಿರಣ, ಪ್ರಭುನವಲಗುಂದ ಮಠ ಇದ್ದರು.