ಹೊಸದಿಗಂತ ವರದಿ, ಧಾರವಾಡ:
ಪಂಚಮಸಾಲಿ ಎಲ್ಲ ಸಮುದಾಯಗಳಿಗೆ ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸಮುದಾಯಕ್ಕೆ ೨-ಎ ಮೀಸಲಾತಿ ನೀಡುತ್ತಾರೆ ಎಂದು ಶಾಸಕ ಬಸವರಾಜ ಪಾಟೀಲ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಗ್ಗಾವಿ, ಹಾನಗಲ್, ರಾಣೆಬೆನ್ನೂರನಲ್ಲೂ ನಮ್ಮ ಸಮುದಾಯದ ತಲಾ 50 ಸಾವಿರ ಜನ ಸಂಖ್ಯೆ ಇದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಜನತೆ ಹೆಚ್ಚಿದ್ದಾರೆ ಎಂದರು.
ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೇಳಿದ್ದೇವೆ. ಯಾರಿಗೂ ಬೆದರಿಕೆ, ಅಂಜಿಕೆ ಹಾಕಿಲ್ಲ. ನಮಗೆ ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದೆ. ಮೀಸಲಾತಿ ಕೊಡಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿದೆ. ಆ ದಿಕ್ಕಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಕಾರಣಕ್ಕಾಗಿ ನಾವು ಈಗ ಸಾಫ್ಟ್ ಆಗಿದ್ದೇವೆ. ಯಡಿಯೂರಪ್ಪ ಮನಸ್ಸಿನಲ್ಲಿ ಏನಿತ್ತೊ ಗೊತ್ತಿಲ್ಲ. ಅದಕ್ಕೆ ಆಗ ಬಹಳ ಹಾರ್ಡ್ ಆಗಿದ್ದವು. ಬೊಮ್ಮಾಯಿ ನಿರ್ಣಯ ಕಾಯ್ದು ನೋಡಲಿದ್ದು, ಬಜೆಟ್ ಪೂರ್ವದಲ್ಲಿ ಅವರು ಸಮಾಜದ ಬೇಡಿಕೆ ಈಡೇರಿಸಲಿದ್ದಾರೆ ಎಂದು ಹೇಳಿದರು.
ಅರವಿಂದ ಬೆಲ್ಲದ ಸಚಿವರಾಗಬೇಕು. ಅವರು ಸಚಿವರಾಗಲು ಅವರದೇಯಾದ ಅರ್ಹತೆ ಇದೆ. ನಾನು ಕೇಳುತ್ತಿರೋದು ಎಲ್ಲ ಸಮುದಾಯಗಳ ನ್ಯಾಯ ಮಾತ್ರ. ಆ ನ್ಯಾಯ ಕೊಟ್ಟರೆ ಮಾತ್ರ ನಾ ಸಚಿವ ಸಂಪುಟ ಸೇರುತ್ತೇನೆ ಎಂದು ತಿಳಿಸಿದರು.