ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತೆ ಉಲ್ಬಣಗೊಂಡಿದ್ದು, ಈ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗುದ್ದು, ಈ ಬೆನ್ನಲ್ಲೇ ಸಭೆ ನಡೆಸಿದ ಅವರು, ಜಾಗತಿಕ ಪೂರೈಕೆ ಏರುಪೇರುಗಳನ್ನು ಎದುರಿಸಲು ಭಾರತದ ಸನ್ನದ್ಧತೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಚರ್ಚೆ ನಡೆಸಿದರು.
ಈ ಸಂದರ್ಭ ಕೇಂದ್ರ ಸರ್ಕಾರವು ಸಂಘರ್ಷದಿಂದ ಉಂಟಾಗುವ ಸಂಭಾವ್ಯ ಅಪಾಯಗಳನ್ನು ತಗ್ಗಿಸಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಪ್ರಸುತ್ತ ಭಾರತವು ಸಮರ್ಪಕ ಇಂಧನ ದಾಸ್ತಾನು ಹೊಂದಿದೆ .ದೇಶದಲ್ಲಿ 60 ದಿನಗಳಿಗೂ ಹೆಚ್ಚು ಕಾಲಕ್ಕೆ ಆಗುವಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹವಿದೆ ಅಧಿಕಾರಿಗಳು ಮಾಹಿತಿ ನೀಡಿದರು .
ಸದ್ಯ ಯೂರಿಯಾ ಮತ್ತು ಡಿಎಪಿ ಸೇರಿದಂತೆ ಸುಮಾರು 47.50 ಲಕ್ಷ ಟನ್ ರಸಗೊಬ್ಬರ ಸಂಗ್ರಹವಿದ್ದು, ಕಾಳಸಂತೆ ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ವಿದೇಶಗಳಲ್ಲಿರುವ ಭಾರತೀಯ ವಲಸಿಗರ ಯೋಗಕ್ಷೇಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಗಲ್ಫ್ ಪ್ರದೇಶದ ದೇಶಗಳೊಂದಿಗೆ ನಿರಂತರ ಸಂವಹನ ಕಾಯ್ದುಕೊಳ್ಳುವಂತೆ ರಕ್ಷಣಾ ಸಚಿವರು ಸೂಚಿಸಿದರು.
ಇದೇ ವೇಳೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜನಾಥ್ ಸಿಂಗ್ ತಿಳಿಸಿದರು .
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು.



