ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಹಾಕಲಾಗಿರುವ ಫ್ಲೆಕ್ಸ್ ಗಳು ಮತ್ತು ಬ್ಯಾನರ್ಗಳ ಕುರಿತು ಕೇರಳ ಹೈಕೋರ್ಟ್ ಕೆಂಡಾಮಂಡಲವಾಗಿದ್ದು, ಪೊಲೀಸ್ ಸೇರಿದಂತೆ ಸರ್ಕಾರಿ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆಯೇ ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಪೀಠ , ಈ ರಾಷ್ಟ್ರದ ಭವಿಷ್ಯದ ಉಸ್ತುವಾರಿ ವಹಿಸುತ್ತೇವೆ ಎನ್ನುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರಗಳ ಆದೇಶಗಳಿಗೆ ಸಂಪೂರ್ಣವಾಗಿ ಯಾವುದೇ ಗೌರವವನ್ನು ನೀಡಲಾಗಿಲ್ಲ ಎಂಬುದು ದುರಂತವಾಗಿದೆಎಂದು ಹೇಳಿದೆ.
ಕೇರಳದಾದ್ಯಂತ ರಾಜಕೀಯ ಪಕ್ಷವು ಮೆರವಣಿಗೆ ನಡೆಸುವಾಗ ಹೆಚ್ಚಿನ ಸಂಖ್ಯೆಯ ಬೋರ್ಡ್ಗಳು, ಬ್ಯಾನರ್ಗಳು, ಧ್ವಜಗಳನ್ನು ಹಾಕಿರುವುದನ್ನು ತೋರಿಸಲು ಛಾಯಾಚಿತ್ರಗಳ ಸಹಿತ ವರದಿಯನ್ನು ಸಲ್ಲಿಸಿದ ಅಮಿಕಸ್ ಕ್ಯೂರಿ ಹರೀಶ್ ವಾಸುದೇವನ್ ಅವರು ಕೋರಿದ ತುರ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ನೀಡಿದೆ.
ತಿರುವನಂತಪುರದಿಂದ ತ್ರಿಶೂರ್ವರೆಗಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿ ಬದಿಯಲ್ಲಿ ಮತ್ತು ಅದರಾಚೆಗೂ ಒಂದು ನಿರ್ದಿಷ್ಟ ರಾಜಕೀಯ ಪಕ್ಷದಿಂದ ಕಾನೂನುಬಾಹಿರ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕಲಾಗಿದೆ. ಪೊಲೀಸ್ ಅಧಿಕಾರಿಗಳು, ಇತರ ಶಾಸನಬದ್ಧ ಅಧಿಕಾರಿಗಳಿಗೆ ಇದರ ಬಗ್ಗೆ ಸಂಪೂರ್ಣ ಅರಿವಿದ್ದರೂ, ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ನ್ಯಾಯಾಲಯವು ಕಾಂಗ್ರೆಸ್ ಪಕ್ಷ ಅಥವಾ ಭಾರತ್ ಜೋಡೋ ಯಾತ್ರೆಯನ್ನು ಹೆಸರಿಸದೆ ತನ್ನ ಆದೇಶ ಹೊರಡಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಕೇರಳದಲ್ಲಿ ಸದ್ಯ ಯಾತ್ರೆ ಸಾಗುತ್ತಿದೆ.