ಹೊಸದಿಗಂತ ವರದಿ,ಕುಷ್ಟಗಿ:
ಕಾಂಗ್ರೆಸ್ ಬ್ರಿಟಿಷರ ವಂಶಾವಳಿ. ಈಗಾಗಿ ಒಡೆದು ಆಳುವ ನೀತಿಯಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಬುಧವಾರ ಬಿಜೆಪಿ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಅಹಿಂದ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ದೀನ ದಲಿತರ ಅಭಿವೃದ್ಧಿ ಮಾಡಿಲ್ಲ. ಇದೀಗ ಅಲ್ಪಸಂಖ್ಯಾತರ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ, 20 ಸಾವಿರ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಕಬಳಿಸುವ ಮೂಲಕ ಮುಸ್ಲಿಮರಿಗೂ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಶೀಘ್ರವೇ ವರದಿ ಬರಲಿದೆ ಎಂದರು.
ಜನಸಂಕಲ್ಪ ಯಾತ್ರೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ನಾವು ಒಂದಾಗಿ ಯಾತ್ರೆ ಮಾಡುತ್ತಿರುವುದರಿಂದ ಅವರಿಗೆ ನಡುಕ ಉಂಟಾಗಿದೆ. ನಾನು ಒಬ್ಬನೆ ಹೋಗಲು ಧಮ್ ಇಲ್ಲ ಎಂದಿದ್ದಾರೆ. ನಾನು ಅವತ್ತೆ ಹೇಳಿದ್ದೆ. ನಮ್ಮ ಯಾತ್ರೆ ಶುರುವಾಗುತ್ತೆ ಧಮ್ ಇದ್ದರೆ ತಡೆಯಿರಿ ಎಂದಿದ್ದೆ. ಬಿಎಸ್ವೈ- ನಾನು ಒಂದಾಗಿ ಹೋದರೆ ಟೀಕೆ ಮಾಡುತ್ತಾರೆ. ಡಿಕೆಶಿ- ಸಿದ್ದು ಇಬ್ಬರು ಒಂದಾಗಿ ಹೋಗಲಿ ಜನ ಏನು ಹೇಳುತ್ತಾರೆ ಗೊತ್ತಾಗುತ್ತದೆ.
ರಾಹುಲ್ ಗಾಂಧಿ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯಗೆ ತಣ್ಣೀರಾಕಿದಂತಾಗಿದೆ ಎಂದು ಕಿಡಿಕಾರಿದರು.