ಹೊಸದಿಗಂತ ವರದಿ,ವಿಜಯನಗರ:
ಸಮೀಪದ ಕಮಲಾಪೂರ್ ಪಟ್ಟಣದ ದಲಿತರ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಉಪಹಾರ ಸೇವಿಸಿ ಗಮನ ಸೆಳೆದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ ಸಿ.ಎಂ.ಬೊಮ್ಮಾಯಿ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕಮಲಾಪೂರ್ ಪಟ್ಟಣದ ಅಂಬೇಡ್ಕರ್ ಕಾಲೋನಿಯ ನಿವಾಸದ ಹೀರಾಳ್ ಯಲ್ಲಮ್ಮನ ಕೊಲ್ಲಾರಪ್ಪ ಅವರ ದಲಿತ ಮಹಿಳೆ ನಿವಾಸಕ್ಕೆ ಬೆಳಿಗ್ಗೆ ಭೇಟಿ ನೀಡಿ, ವಗ್ಗರ್ಣಿ, ಉಪ್ಪಿಟ್ಟು, ಮಿರ್ಚಿ ಸೇವಿಸಿ, ಚಹ ಕುಡಿದು ಗಮನಸೆಳೆದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ್, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವ ಹಾಲಪ್ಪ ಆಚಾರ್, ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಂಸದ ವೈ.ದೇವೇಂದ್ರಪ್ಪ, ಸುರಪುರ ಶಾಸಕ ರಾಜುಗೌಡ ಅವರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಚೆನ್ನಬಸವನಗೌಡ ಪಾಟೀಲ್, ಮಂಡಲ ಅದ್ಯಕ್ಷ ಉಮಾಪತಿ, ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಶೃಂಗಾರಗೊಂಡ ಪಟ್ಟಣ: ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರ ಆಗಮನ ಹಿನ್ನೆಲೆ ಕಮಲಾಪೂರ್ ಪಟ್ಟಣ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಪಟ್ಟಣದ ಅನೇಕ ರಸ್ತೆಗಳಲ್ಲಿ ಜನಸಾಗರವೇ ನೆರೆದಿತ್ತು.