ಹೊಸದಿಗಂತ ವರದಿ ಕಲಬುರಗಿ :
ಕಾಂಗ್ರೆಸ್ ನಲ್ಲಿ ನರೇಂದ್ರ ಮೋದಿಗೆ ಸರಿ ಸಮಾನರಾದ ನಾಯಕರು ಯಾರೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮನಬಂದಂತೆ ಮಾತನಾಡುತ್ತಿದ್ದು,ಕೂಡಲೇ ಆ ರೀತಿಯ ಮಾತುಗಳನ್ನು ಆಡುವುದು ನಿಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಡಾಳು ವಿರುಪಾಕ್ಷಪ್ಪಾ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರವಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಯಾರೇ ಮಾಡಿದರು ಅದು ಅಕ್ಷಮ್ಯ ಅಪರಾಧವಾಗಿದ್ದು,ಈ ಘಟನೆಗೆ ನಮ್ಮಲ್ಲಿ ಯಾರ ಬೆಂಬಲವು ಇಲ್ಲ.ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕರಣವು ತನಿಖೆ ಹಂತದಲ್ಲಿದ್ದು, ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿಲ್ಲ. ಅವರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂದು ಅಥವಾ ನಾಳೆ ಅವರ ಬಂಧನವಾಗಲಿದ್ದು, ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಮಾತೇ ಇಲ್ಲ ಎಂದು ಹೇಳಿದರು.
ಈ ವೇಳೆ ಬಿಜೆಪಿ ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನ-ಮಾನ, ಗೌರವವನ್ನು ನೀಡಿದ್ದು, ಈ ಪರಿಯಾದ ಗೌರವ ಬೇರಾರಿಗೂ ನೀಡಿಲ್ಲ. ನಾನೇ ಸ್ವತಃ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಅವರು ಸ್ವಷ್ಟ ನಿಲುವು ಹೇಳಿಲ್ಲ. ಸಚಿವ ಸೋಮಣ್ಣ ಪಕ್ಷ ಬಿಡುವ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದ ಅವರು, ನಾರಾಯಣ ಗೌಡರನ್ನು ಕಷ್ಟ ಪಟ್ಟು ಗೆಲ್ಲಿಸಿದ್ದೇವೆ. ಗೆಲ್ಲಿಸುವುದಕ್ಕೆ ಆಗದೆ ಇರುವ ಕಡೆಯಲ್ಲಿ ಗೆಲ್ಲಿಸಿದ್ದೇವೆ. ಈಗ ಯಾರೆಲ್ಲ ಎನೂ ಮಾಡುತ್ತಾರೆ ನೋಡೋಣ ಎಂದು ಹೇಳಿದರು.