ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಶ್ರಮಿಸದ ಕಾಂಗ್ರೆಸ್: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಬಳ್ಳಾರಿ:

ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ ಎಸ್ಸಿ, ಎಸ್ಟಿ, ಓಬಿಸಿ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಶ್ರಮಿಸಿಲ್ಲ, ಅವರ ಬಗ್ಗೆ ಚಿಂತನೆಯೂ ಮಾಡಿಲ್ಲ, ಕಾಂಗ್ರೆಸ್ ನವರಿಗೆ ಇದರ ಶಾಪ ತಟ್ಟದೇ ಬಿಡೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದರು.

ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಬಳಿಯ ಜಿ.ಸ್ಕ್ವಾಯರ್ ಆವರಣದಲ್ಲಿ ಬಿಜೆಪಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ, ಒಬಿಸಿ ಸೇರಿ ಎಲ್ಲ ವರ್ಗದವರ ಬದುಕು ಬದಲಾಗಬೇಕು, ಅವರೂ ಎಲ್ಲರಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ, ಮೋದಿಜೀ ಅವರ ಆಶಯದಂತೆ ಸಬ್ ಸಾಥ್, ಸಬ್ ಕಾ ವಿಕಾಸ್ ತತ್ವದಡಿ ಮುನ್ನೆಡೆದಿದ್ದೇವೆ, ಎಸ್ಸಿ, ಎಸ್ಟಿ ವರ್ಗದವರ ಮೀಸಲಾತಿ ಹೆಚ್ಚಳಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಕುಲ ಗುರುಗಳು, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರ ಸ್ಪೂರ್ತಿಯಿಂದ ಈ ಸಾಧನೆ ಮಾಡಲಾಗಿದೆ. ಮನುಷ್ಯನಾಗಿ ಎಲ್ಲರ ಮನಸ್ಸನ್ನು ಸಮಾನವಾಗಿ ನೋಡುವ ಮೂಲಕ ಈ ಮಹತ್ವದ ನಿರತಣಯವಾಗಿದೆ. ಇದಕ್ಕೆ ಮೊಟ್ಟ ಮೊದಲು ಮೋದಿಜೀ, ಅಮೀತ್ ಶಾ, ನಡ್ಡಾಜೀ ಅವರು ಅನುಕರಣೆ ಮಾಡಿದ್ದಾರೆ, ಎಸ್ಟಿ ಅವರಿಗೆ 3-7 ಹೆಚ್ಚಳ ಹಾಗೂ ಎಸ್ಸಿ ಅವರಿಗೆ 15-17 ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದೆ. ಮೋದಿಜೀ ಅವರು ಕೊಟ್ಟ ಈ ಕೊಡುಗೆಗೆ ಯಾರೂ ಅಡೆತಡೆ ಮಾಡಲು ಸಾಧ್ಯವೇ ಇಲ್ಲ ಎಂದರು.

ನಮ್ಮಿಂದಲೇ ಎಸ್ಸಿ, ಎಸ್ಟಿ ಅವರ ಉದ್ದಾರ ಎನ್ನುವ ಕಾಂಗ್ರೆಸ್ ಕೇವಲ ಅವರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡು, ಚುನಾವಣೆಯಲ್ಲಿ ಅವರಿಂದ ಮತ ಪಡೆದ ಕಾಂಗ್ರೆಸ್ ನವರಿಗೆ ಅಂತ್ಯ ಕಾಲ ಶುರುವಾಗಿದೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನವರ ಕೊಡುಗೆ ಶೂನ್ಯ. ಸಿದ್ದರಾಮಣ್ಣ ಅಹಿಂದ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ರು, ಎಸ್ಸಿ, ಎಸ್ಟಿ ನಮ್ಮವರು, ಎನ್ನುವ ಕಾಂಗ್ರೆಸ್‌ನ ವರ ದ್ರೋಹದ ಕೆಲಸ ಇನ್ಮುಂದೆ ನಡೆಯೋಲ್ಲ, ಸೋನಿಯಾ ಗಾಂಧಿ ಬಳ್ಳಾರಿ ಯಿಂದ ಗೆದ್ದು, ಕನಿಷ್ಟ ಕೃತಜ್ಞತೆ ಹೇಳಲು ಬರಲಿಲ್ಲ, ನೇರ ಅಮೇಥಿಗೆ ಓಡಿ ಹೋದ್ರು, ಬಳ್ಳಾರಿಯ ಅಭಿವೃದ್ಧಿಗೆ 3 ಸಾವಿರ ಕೋಟಿ ಪ್ಯಾಕೇಜ್ ಅಂದ್ರು, 3 ರೂ.ಬರಲಿಲ್ಲ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!