ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ನವರಿಗೆ ಈವರೆಗೆ ಬುದ್ದಿ ಬಂದಿಲ್ಲ. ಗುತ್ತಿಗೆದಾರ ಕೆಂಪಣ್ಣನವರು ಬರೆದಿರುವ ಪತ್ರದ ಆಧಾರವಿಟ್ಟುಕೊಂಡು ಶೇ.40 ಕಮಿಷನ್ ಆರೋಪ ಮಾಡುತ್ತಿದ್ದಾರೆ. ಪೇಸಿಎಂ ಮಾಡುವ ಮೂಲಕ ಚಿಲ್ಲರೆ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಏನೇ ಮಾಡಿದರೂ ಜನಸಾಮಾನ್ಯರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ನವರು ಅದಕ್ಕೆ ಬದ್ಧವಾದ ಸಂಸ್ಥೆಗಳಿಗೆ ಅಪಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ನವರು ಅಧಿಕಾರದ ಹಿಂದೆ ಓಡಿ ಹೋದವರು. ಬಿಜೆಪಿ ವಾಜಪೇಯಿ ಅವರ ಕಾಲದಲ್ಲಿ ಎಂಟು ವರ್ಷ ಅಧಿಕಾರ ನಿರ್ವಹಿಸಿದೆ. ಉಳಿದ ಸಮಯ ಕಾಂಗ್ರೆಸ್ನವರೆ ಆಡಳಿತ ಮಾಡಿದ್ದಾರೆ. ಆಗ ಇಡಿ, ಸಿಬಿಐ ದುರುಪಯೋಗ ಮಾಡಿಕೊಂಡಿರುವ ಆರೋಪ ಬಂದಿರಲಿಲ್ಲವೇ? ಆದರೆ ಇದೀಗ ಇಡಿ, ಸಿಬಿಐಗಳನ್ನು ದೂರುವುದು ಎಷ್ಟು ಸರಿ. ಈ ಮೂಲಕ ಸಂವಿಧಾನಕ್ಕೆ ಮಹತ್ವ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಇನ್ನು ಭಾರತ ಜೋಡೋ ಯಾತ್ರೆಗೆ ಸೋನಿಯಾಗಾಂಧಿ ಅವರು ಬರಲೇಬೇಕಿತ್ತು, ಬಂದಿದ್ದಾರೆ. ಅವರು ಅವರ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೆವೆ.
ರಾಜ್ಯ ಕಾರ್ಯಕಾರಣಿ ಪಕ್ಷ ಸಂಘಟನೆ ದೃಷ್ಟಿಯಿಂದ ಎರಡು-ಮೂರು ತಿಂಗಳಿಗೊಮ್ಮೆ ನಡೆಯುವ ಪ್ರಕ್ರಿಯೆಯಾಗಿದೆ. ಚುನಾವಣೆ ಬಂದೆ ಬರುತ್ತವೆ. ಹಾಗಾಗಿ ರಾಜಕೀಯ ಪಕ್ಷವಾಗಿ ಚುನಾವಣೆ ಹೇಗೆ ಎದುರಿಸಬೇಕು ಪಕ್ಷ ಸಂಘಟನೆ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದರು.