ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದ ದೊಡ್ಡ ಪ್ರಮಾಣದಲ್ಲಿ ಬರಗಾಲವಿದ್ದರೂ ಸರ್ಕಾರ ಮಾತ್ರ ತನ್ನ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿದೆ. ಇದೊಂದು ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಸರ್ಕಾರದ ವಿರುದ್ಧ ಹರಿಹಾಯ್ದರು.
ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮೂರು-ನಾಲ್ಕು ತಿಂಗಳಲ್ಲಿಯೇ ಜನ ವಿರೋಧಿ ಸರ್ಕಾರ ಎಂದು ಸಾಬೀತು ಪಡಿಸಿದೆ. ನಾವು ಕೂಡ ಸರ್ಕಾರದ ನಡೆ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ. ಸರ್ಕಾರದ ನಡೆಗಳನ್ನು ಅಧ್ಯಯನ ಮಾಡಿ ಹಂತ ಹಂತವಾಗಿ ಹೋರಾಟ ಕೈಗೊಳ್ಳುತ್ತೇವೆ. ನಾವೇನೂ ಸರ್ಕಾರವನ್ನು ಬೀಳಿಸುವುದಿಲ್ಲ. ಅವರ ಒಳಜಗಳದಿಂದ ಸರ್ಕಾರ ಬಿಳಲಿದೆ. ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸರ್ಕಾರಗಳನ್ನು ಕೆಡವಿದೆ. 11 ರಾಜ್ಯಗಳಲ್ಲಿ ಅವರ ಆಂತರಿಕ ಕಚ್ಚಾಟದಿಂದ ಸರ್ಕಾರಗಳು ಅಸ್ಥಿರಗೊಂಡಾಗ ಬಿಜೆಪಿ ಅಲ್ಲಿ ಸರ್ಕಾರವನ್ನು ರಚಿಸಿದೆ. ಸರ್ಕಾರ ರಚಿಸುವ ಅವಕಾಶವನ್ನು ಅವರೇ ನಮಗೆ ನೀಡಿದ್ದಾರೆ ಎಂದು ಹೇಳಿದರು.
ಬರಗಾಲಕ್ಕೆ ರಾಜ್ಯ ಸರ್ಕಾರ ತುರ್ತು ಹಣ ಬಿಡುಗಡೆ ಮಾಡುವ ಅವಕಾಶವಿದೆ. ಹಣ ಮೀಸಲಿಟ್ಟಿದ್ದೇವೆ ಎಂಬುದಾರೆ ಸರ್ಕಾರ ತಕ್ಷಣ ಬಿಡುಗಡೆಗೊಳಿಸಬೇಕು. ರಾಜ್ಯದಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸುವ ಬದಲು ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.