ಹೊಸದಿಗಂತ ವರದಿ,ವಿಜಯಪುರ:
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಅದಕ್ಕಾಗಿ ಕಾಂಗ್ರೆಸ್ ನವರು ಮೇಕೆದಾಟು ಯೋಜನೆಯಲ್ಲಿ ನಾಟಕ, ಫಿಲ್ಮ ಶೂಟಿಂಗ್ಗೆ ಹೋದಂತೆ ಪ್ರತಿಭಟನೆಗೆ ಹೋಗುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸುತ್ತ, ಸಿದ್ದರಾಮಯ್ಯ ಅವರಂತೂ ಮನೆಯಲ್ಲಿ ಮೇಕೆದಾಟು ಯೋಜನೆ ಬೋರ್ಡ್ ಹಿಂದೆ ಇಟ್ಟುಕೊಂಡು ನಡೆದುಕೊಂಡು ಹೋದಂತ ಫೋಟೋ ಹಾಕಿಕೊಳ್ಳುತ್ತಿದ್ದಾರೆ. ಜನರು ಹುಚ್ಚರಿದ್ದಾರೆಂದು ತಿಳಿದುಕೊಂಡಿದ್ದಾರೆಂದು ಸಿದ್ದು ವಿರುದ್ಧ ಕಿಡಿಕಾರಿದರು. ಇನ್ನೂ 2013ರಲ್ಲಿ ಅಧಿಕಾರಕ್ಕೆ ಬರುವಾಗ ಸಿದ್ದರಾಮಯ್ಯ ಕಾಂಗ್ರೆಸ್ ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆಗೆ ವರ್ಷಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಕೂಡಲಸಂಗಮದಲ್ಲಿ ಆಣೆ ಪ್ರಮಾಣ ಮಾಡಿದ್ದರು.
ಆದರೆ ಕೆಬಿಜೆಎನ್ಎಲ್ ಗೆ ಕೊಟ್ಟಿದ್ದು ಎಷ್ಟು? ಕಳೆದ ಅಧಿವೇಶನದಲ್ಲಿ ತಪ್ಪು ಮಾಹಿತಿಯನ್ನು ನೀಡಿದರು.
ಸದನದಲ್ಲಿ ಉಲ್ಟಾ ಮಾತನಾಡಿದರು ಎಂದರು.
ಈಗ ಕಾಂಗ್ರೆಸ್ನವರು ಮಾಡುತ್ತಿರುವುದು ಎಲ್ಲವೂ ಸ್ಟಂಟ್ ಆಗಿದೆ. ಆಗ ನೀರಾವರಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ತಂತ್ರಗಳನ್ನು ಯಾರು ಕೇಳಲ್ಲ. ಫಿಲಂ ಶೂಟಿಂಗ್ ಮಾಡಿದಂತೆ ನಾಟಕ ನಡೆಸಿದ್ದನ್ನು ನೋಡಲ್ಲ ಎಂದರು.