ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಗಾಂಧಿಗಳು ಕಾಂಗ್ರೆಸ್ ನಾಯಕತ್ವದಿಂದ ಬದಿಗೆ ಸರಿದು ಬೇರೆಯವರಿಗೆ ಹಾದಿ ಮಾಡಿಕೊಡುವುದಕ್ಕೆ ಇದು ಸಮಯ”- ಹೀಗೆಂದು ಹೇಳಿದ್ದಾರೆ ಕಾಂಗ್ರೆಸ್ಸಿನ ಹಿರಿಯ ನಾಯಕ ಕಪಿಲ್ ಸಿಬಲ್. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಕಡೆ ಹೀನಾಯ ಪ್ರದರ್ಶನ ನೀಡಿದ ನಾಲ್ಕು ದಿನಗಳ ನಂತರ ಈ ಹೇಳಿಕೆ ಹೊರಬಿದ್ದಿದೆ. ಅತ್ತ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾತ್ರ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಪುನರುಚ್ಚರಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕಪಿಲ್ ಸಿಬಲ್ ಈ ಮಾತುಗಳನ್ನು ಹೇಳಿದ್ದಾರೆ.
- ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆಚೆಗೂ ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. ಅವರೆಲ್ಲರ ಅಭಿಮತವೂ ನಾಯಕತ್ವ ಬದಲಾವಣೆ ಆಗಬೇಕು ಎಂಬುದಿದೆ.
- ಎಂಟು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಪತನಕ್ಕೆ ಕಾರಣವನ್ನು ಸ್ಪಷ್ಟಪಡಿಸಿಕೊಂಡಿಲ್ಲ ಎಂದಾದರೆ ಇವರೆಲ್ಲ ಮತ್ಯಾವುದೋ ಜಗತ್ತಿನಲ್ಲಿ ವಿಹರಿಸುತ್ತಿದ್ದಾರೆ ಎಂದಾಯಿತು.
- ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಲ್ಲ ಎಂದಮೇಲೆ ಪಂಜಾಬಿನಲ್ಲಿ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾವ ಆಧಾರದಲ್ಲಿ ಘೋಷಿಸಿದರು? ಅವರು ಅಘೋಷಿತ ಅಧ್ಯಕ್ಷರೇ ಆಗಿರುವಾಗ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮತ್ತೆ ಅವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಣಯ ಕೈಗೊಳ್ಳುವುದರಲ್ಲಿ ಯಾವ ಅರ್ಥವಿದೆ?
- ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿರಾಟ್ ಕೋಹ್ಲಿ ಎಲ್ಲರೂ ಮೇರು ಆಟಗಾರರೇ. ಆದರೆ ಒಂದಲ್ಲ ಒಂದು ದಿನ ಎಲ್ಲರೂ ನಿವೃತ್ತಿ ತೆಗೆದುಕೊಳ್ಳಲೇಬೇಕಲ್ಲ? ಇತಿಹಾಸದಲ್ಲಿ ಅವರಿಗಿರುವ ಸ್ಥಾನ ಇದ್ದೇ ಇರುತ್ತದೆ. ಅಂತೆಯೇ, ಗಾಂಧಿ ಕುಡಿಗಳು ಪಕ್ಕಕ್ಕೆ ಸರಿದು ಚುನಾಯಿತ ನಾಯಕನೊಬ್ಬ ಕಾಂಗ್ರೆಸ್ ಚುಕ್ಕಾಣಿ ಹಿಡಿಯಬೇಕಿದೆ.