ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ತನಗೆ ಕಡಿಮೆ ದರದಲ್ಲಿ ಇಂಧನ ನೀಡುವಂತೆ ಆದೇಶಿಸಬೇಕು ಎಂದು ಕೇರಳದ ಸಾರಿಗೆ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸೋಮವಾರ ಈ ಅರ್ಜಿ ಪುರಸ್ಕಾರಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದ್ದಲ್ಲದೇ, ಮತ್ತೊಂದು ವಿಷಯ ಪ್ರಸ್ತಾಪದ ಮೂಲಕ ಕೇರಳ ಸರ್ಕಾರಕ್ಕೆ ಜಾಡಿಸಿತು.
“ಈ ವಿಷಯವನ್ನು ಕೇರಳದ ಹೈಕೋರ್ಟಿನಲ್ಲಿ ಪ್ರಸ್ತಾಪಿಸಿ. ಇಷ್ಟಕ್ಕೂ, ನಿಮ್ಮ ಸರ್ಕಾರದಲ್ಲಿ ಕೊಡುವುದಕ್ಕೆ ಬಹಳ ಹಣವಿದೆಯಲ್ಲ? ಏಕೆಂದರೆ ಮಂತ್ರಿಗಳ ಸಹಾಯಕರು ಕೇವಲ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರೂ ಅವರಿಗೆ ಪಿಂಚಣಿ ಕೊಡುವ ವ್ಯವಸ್ಥೆ ನಿಮ್ಮಲ್ಲಿದೆ. ಅಲ್ಲೆಲ್ಲ ಸರ್ಕಾರಿ ಖಜಾನೆಯನ್ನು ಬೇಕಾದಂತೆ ಖರ್ಚು ಮಾಡುವುದಕ್ಕಾಗುತ್ತದೆ, ಆದರೆ ಇಲ್ಲಿ ಇಂಧನಕ್ಕೆ ಕೊಡಲು ಹಣವಿಲ್ಲ ಎನ್ನುತ್ತಿದ್ದೀರಿ. ನಮ್ಮ ಈ ಅಭಿಪ್ರಾಯವನ್ನು ನಿಮ್ಮ ಸರ್ಕಾರಕ್ಕೆ ತಿಳಿಸಿ” ಎಂದು ಕಟುವಾಗಿ ಹೇಳಿದರು ನ್ಯಾಯಮೂರ್ತಿಗಳು.
ಕೇರಳದಲ್ಲಿ ಸರ್ಕಾರವು ತನ್ನ ಸಚಿವರಿಗೆ ಇಪ್ಪತ್ತಕ್ಕಿಂತಲೂ ಹೆಚ್ಚು ಆಪ್ತ ಸಹಾಯಕರನ್ನು ತಮ್ಮಿಷ್ಟದಂತೆ ನೇಮಿಸಿ, ನಂತರ ಅವರಿಗೆ ಸರ್ಕಾರದ ಖಜಾನೆಯಿಂದ ಪಿಂಚಣಿ ಕೊಡುವ ವ್ಯವಸ್ಥೆ ಮಾಡಿಕೊಂಡಿರುವುದನ್ನು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ವಿರೋಧಿಸಿದ್ದರು. ಈ ಬಗ್ಗೆ ಅವರು ಹಲವು ಬಾರಿ ಮಾಧ್ಯಮದೆದುರು ಮಾತನಾಡಿ, ಕಮ್ಯುನಿಸ್ಟ್ ಸರ್ಕಾರವು ಸರ್ಕಾರಿ ದುಡ್ಡಿನಲ್ಲಿ ತನ್ನ ಕಾರ್ಯಕರ್ತರನ್ನು ಹೇಗೆ ಸಲಹುತ್ತಿದೆ ಎಂಬುದನ್ನು ವಿವರಿಸಿದ್ದರು. ಇದೀಗ ಅದು ರಾಜ್ಯಪಾಲರ ಸಂದರ್ಶನ ಛಾಪಿಸಿದ್ದ ಪತ್ರಿಕೆಯ ಮೂಲಕ ಸುಪ್ರೀಂಕೋರ್ಟ್ ಗಮನಕ್ಕೂ ಬಂದಿದೆ.
ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಈ ಹಗರಣವನ್ನು ವಿವರಿಸಿರುವ ವಿಡಿಯೊ ಇಲ್ಲಿ ನೋಡಬಹುದು.