ದಿಗಂತ ವರದಿ ಶಿವಮೊಗ್ಗ :
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಬಂದಾಗ ಅವರ ಮುಖಕ್ಕೆ ಭಗವಾಧ್ವಜ ಹಿಡಿದು ತೋರಿಸಲಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಅಸ್ಮಿತೆ ಭಗವಾಧ್ವಜ. ತ್ಯಾಗ ಬಲಿದಾನದ ಸಂಕೇತ. ಮಹಾಭಾರತದಲ್ಲಿ ಶ್ರೀಕೃಷ್ಣ ನ ರಥದ ಮೇಲೆ ಹಾಕಿದ್ದ ಧ್ವಜ.ಅದನ್ನು ಕೀಳಾಗಿ ಕಾಣುವ ಕಾಂಗ್ರೆಸ್ ನಾಯಕರು ಈ ದೇಶದಲ್ಲಿ ಇರಲು ಅರ್ಹರಲ್ಲ. ಈ ದೇಶದ ಸಂವಿಧಾನ, ಸಂಸ್ಕೃತಿಯ ಬಗ್ಗೆ ನಂಬಿಕೆ ಇಲ್ಲದಿದ್ದರೆ ನೀವು ನಂಬಿಕೆ ಇಡುವ ದೇಶಕ್ಕೆ ಹೋಗಬಹುದೆಂದು ಹರಿಹಾಯ್ದರು.
ಗ್ರಾಪಂ ಸದಸ್ಯರೊಬ್ಬರು ಕಾರ್ಯಕ್ರಮದಲ್ಲಿ ಕೇಸರಿ ಪೇಟ ಹಾಕಿದರೆ ಅದನ್ನು ತೆಗೆದು ಎಸೆಯುತ್ತೀರಿ, ಟಿಪ್ಪು ಪೇಟ ಧರಿಸಿ ನಮಾಜು ಮಾಡುತ್ತೀರಿ. ಇದು ನಿಮ್ಮ ಹಿಂದುವಿರೋಧಿ ಮನಸ್ಥಿತಿಯಲ್ಲವೇ ಎಂದು ಪ್ರಶ್ನಿಸಿದರು.
ಲಾಲ್ ಚೌಕಗನಲ್ಲಿ ರಾಷ್ಟ್ರ ಧ್ವಜಹಾರಿಸುವಾಗ ಕರ್ನಾಟಕ ತಂಡದ ನೇತೃತ್ವ ವಹಿಸಿದ್ದ ಈಶ್ವರಪ್ಪನವರನ್ನು ದೇಶದ್ರೋಹಿ ಎನ್ನಲು ಡಿ.ಕೆ.ಶಿವಕುಮಾರ್ ಅವರಿಗೆ ಯಾವ ನೈತಿಕತೆ ಇದೆ. ಭಾರತವನ್ನು ಇಬ್ಬಾಗ ಮಾಡಿದ ಕಾಂಗ್ರೆಸ್ ನಾಯಕರಿಂದ ರಾಷ್ಟ್ರ ಭಕ್ತಿಯ ಪಾಠ ಬೇಕಿಲ್ಲ. ಶಿವಮೊಗ್ಗದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾರಿಸಿದ್ದು ಕೇಸರಿ ಧ್ವಜ. ಖಲಿಸ್ಥಾನದ ಧ್ವಜ ಅಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿಯಬೇಕಿದೆ ಎಂದರು.
ಭಾರತೀಯರ ಸಂಸ್ಕೃತಿ ಬಿಂದಿ, ಬಳೆ ಬಗ್ಗೆ ಮಾತನಾಡಲು ಬೇರೆಯವರಿಗೆ ಏನು ಹಕ್ಕಿದೆ.ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ ಎಂದರೆ ಧರ್ಮ ಬೇಕು ಎನ್ನುವ ಕೊಳಕು ಮನಸ್ಥಿತಿ ಪ್ರದರ್ಶನ ಮಾಡಲಾಗುತ್ತಿದೆ. ಧರ್ಮದ ಆಚರಣೆ, ಪಾಲನೆ ಎಲ್ಲಿ ಮಾಡಬೇಕೆಂಬುದನ್ನು ಸಂವಿಧಾನ ಹೇಳಿದೆ. ಅದನ್ನು ಪಾಲಿಸದೆ ಶಾಲಾಕಾಲೇಜುಗಳಿಗೆ ಅದನ್ನು ತರುವುದು ಏಕೆ ಎಂದು ಪ್ರಶ್ನಿಸಿದರು.