ಹೊಸದಿಗಂತ ವರದಿ ಕುಂದಗೋಳ:
ಬಿಜೆಪಿ ತತ್ವ, ಆದರ್ಶ, ದೇಶ ಭಕ್ತಿ, ಪ್ರೇಮ, ಅಭಿವೃದ್ಧಿ ಹಾಗೂ ಕರ್ನಾಟಕ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳಿತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಕುಂದಗೋಳ ವಿಧಾನಸಭಾ ಕ್ಷೇತ್ರದ ಬೃಹತ್ ರೋಡ್ ಶೋ ನಡೆಸಿ, ಅಭ್ಯರ್ಥಿ ಎಂ.ಆರ್.ಪಾಟೀಲ ಪರ ಮತಯಾಚಿಸಿ ಬಳಿಕ ಸಾರ್ವಜನಿಕರ ಉದ್ದೇಶಿಸಿ ಮತನಾಡಿದರು.
ಅಭಿವೃದ್ಧಿ ಶೂನ್ಯ, ಆಸೆ, ಆಮಿಷವೊಡ್ಡಿ, ಸಮಾಜ ಒಡೆದು ದೇಶ ದ್ರೋಹಿಗಳಿಗೆ ಪರೋಕ್ಷವಾಗಿ ಸಹಾನುಭೂತಿ ನೀಡುವ ಕಾಂಗ್ರೆಸ್ ಇನ್ನೊಂದು ಕಡೆ ಮತ ಕೇಳುತ್ತಿದೆ. ಇಂದು ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ನಮ್ಮ ಕಾಪಿ ಪೇಸ್ಟ್ ಎಂಬ ಮಾತನ್ನಾಡಿದರು.
ನವ ಕರ್ನಾಟಕ ನಿರ್ಮಾವಾಗಬೇಕಾದರೆ ಪ್ರತಿ ಗ್ರಾಮಗಳು ಅಭಿವೃದ್ಧಿ ಹೊಂದಬೇಕು. ಅದಕ್ಕೆ ಬೇಕಾದ ಶಿಕ್ಷಣ ಉದ್ಯೋಗ, ಮೂಲಸೌಕರ್ಯ ನಾವು ನೀಡುತ್ತಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಮೇ 10ರ ವರೆಗೆ ಮಾತ್ರ ನಂತರ ಗಳಘಂಟೆ. ನಾವು ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಸ್ವಲ್ಪ ಬದಲಿಸಿ ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಮಹಿಳೆಯರಿಗೆ ಬಸ್ ಪಾಸ್, 10ಕೆ.ಜಿ. ಪಡಿತರ, ಕಳಸಾ ಬಂಡೂರಿ ಯೋಜನೆ ಒಂದು ವರ್ಷದಲ್ಲಿ ಕಾಮಗಾರಿ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಬಿಜೆಪಿ ಕಳಸಾ ಬಂಡೂರಿ ಟೆಂಡರ್ ಕರೆದಿದ್ದು ಒಂದು ವರ್ಷದಲ್ಲಿ ರೈತರಿಗೆ ನೀರು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿಯಲ್ಲಿ 10ಕೆ.ಜಿ. ಅಕ್ಕಿ ನೀಡುತ್ತೇವೆ ಎನ್ನುತ್ತಿದ್ದಾರೆ. 2013ರಲ್ಲಿ ನಮ್ಮ ಅಧಿಕಾರವಿದ್ದಾಗ 10 ಕೆ.ಜೆ.ಅಕ್ಕಿ ನಮ್ಮ ಸರ್ಕಾರ ನೀಡುತ್ತಿತ್ತು. ಅವರು ಬಂದ ಮೇಲೆ 5ಕೆ.ಜೆ.ಗೆ ಇಳಿಸಿದರು. ಬಳಿಕ ನಮ್ಮ ಸರ್ಕಾರ ಬಂದ ಮೇಲೆ ಕೊರೋನಾ ಸಮಯದಲ್ಲಿ ಸಹ 10 ಕೆ.ಜೆ. ನೀಡಿದ್ದೇವೆ. ಪ್ರಧಾನಿ ಮೋದಿ ಅವರು ನೀಡಿದ್ದ ಅಕ್ಕಿಗೆ ಅನ್ನ ಭಾಗ್ಯ ಯೋಜನೆ ತಂದಿದ್ದೇವೆ ಎಂದು ಪ್ರಚಾರ ಪಡೆದುಕೊಂಡರು.
ಕಾಂಗ್ರೆಸ್ನವರದು ಅನ್ನಭಾಗ್ಯ ರಾಜ್ಯದ ದೌರ್ಭಾಗ್ಯವಾಗಿತ್ತು. ಅವರ ಅನ್ನ ಭಾಗ್ಯ ಜನರ ಕನ್ನಭಾಗ್ಯವಾಗಿದೆ ಎಂದರು.
ಕಾಂಗ್ರೆಸ್ ಎಲ್ಲ ಗ್ಯಾರಂಟಿ ಈಡೇರಿಸಬೇಕಾದರೆ 6ಲಕ್ಷ ಕೋಟಿ ರೂಪಾಯಿ ಬೇಕು. ಎಲ್ಲಿಂದ ತರುತ್ತಾರೆ ಅವರು, ಮೋಸ ಮಾಡಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಇವರಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಹರಿಹಾಯ್ದರು.