ದಿಗಂತ ವರದಿ ಹುಬ್ಬಳ್ಳಿ:
ಸದನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಜನತೆ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ವೋಟ್ ಬ್ಯಾಂಕ್ ದೃಷ್ಟಿಯಿಂದ ಅನವಶ್ಯಕ ವಿಚಾರ ಇಟ್ಟುಕೊಂಡು ರಾತ್ರಿಯಿಡಿ ಧರಣಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಈ ರೀತಿ ಮಾಡುತ್ತಿರುವುದು ಎಷ್ಟು ಸರಿ? ವಿರೋಧ ಪಕ್ಷ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಉತ್ತಮವಾದ ಸಲಹೆ ಸೂಚನೆ ನೀಡಬೇಕು. ಆದರೆ ಅವರು ಇಲ್ಲ ಸಲ್ಲದ ವಿಷಯಗಳನ್ನು ಮುಂದಿಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ದೇವರು ಸದ್ಭುದ್ಧಿ ನೀಡಲಿ ಎಂದರು.
ಹಿಜಾಬ್ ಗೊಂದಲವನ್ನು ಕೆಲವರು ಉದ್ದೇಶಪೂರ್ವಕವಾಗಿ ಮುಗಿಸುತ್ತಿಲ್ಲ.ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೆನೆ ಕೆಲವು ಕಡೆ ಈ ರೀತಿ ಕೃತ್ಯ ಮಾಡುತ್ತಿರುವವರಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ ಎಂದು ತಿಳಿಸಿದರು.
ಮಧ್ಯಂತರ ಆದೇಶ ಪಾಲನೆ ಮಾಡದ ಕಡೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು. ಮುಂದೆ ಕೋರ್ಟ್ ಅಂತಿಮ ಆದೇಶ ಬಂದಾಗಲೂ ಹೀಗೆಯೆ ನಡೆದುಕೊಳ್ಳುತ್ತೇವೆ ಎಂದರೆ ಹೇಗೆ? ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶಾಲಾ ಕಾಲೇಜುಗಳಿಗೆ ಬಂದು ಹಿಜಾಬ್ ಧರಿಸಲು ಹಾಗೂ ತೆಗೆಸಲು ಒತ್ತಾಯ ಮಾಡಲು ಬರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.