ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲೆರಡು ಹಂತದ ಚುನಾವಣೆ ಬಳಿಕ ಆಯೋಗ ಪ್ರಕಟಿಸಿದ ಮತಗಳ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ಇದು ಅಂತಿಮ ಫಲಿತಾಂಶವನ್ನೂ ಬದಲಿಸುವ ಪ್ರಯತ್ನವೇ ಎಂದು ಚುನಾವಣಾ ಆಯೋಗದ ವಿರುದ್ದವೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಚುನಾವಣಾ ಆಯೋಗ ಖಡಕ್ ಉತ್ತರ ನೀಡಿದೆ.
ಆಧಾರ ರಹಿತ ಹೇಳಿಕೆಗಳು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಯಾಗುವಂತಿದೆ. ಈ ರೀತಿಯ ಹೇಳಿಕೆಯಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಅರಾಜಕತೆ ಸೃಷ್ಟಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಆಯೋಗ ಹೇಳಿದೆ.
ಖರ್ಗೆ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ , ಮತದಾನ ಮಾಹಿತಿ ನೈಜ ಸಮಯದಲ್ಲಿ ಲಭ್ಯವಿದೆ. ಆದರೆ ಮತದಾನ ಪ್ರಮಾಣ ಪ್ರಕಟನೆ ವಿಳಂಬವಾಗಿದೆ ಅನ್ನೋ ಕಾಂಗ್ರೆಸ್ ಆರೋಪ ಅಸಂಬದ್ಧ ಎಂದು ಹೇಳಿದೆ.
ಕಾಂಗ್ರೆಸ್ ಅಥವಾ ಇಂಡಿಯಾ ಒಕ್ಕೂಟದ ಯಾವುದೇ ಅಭ್ಯರ್ಥಿ ಅಂತಿಮ ಮತದಾನದ ಮಾಹಿತಿ ಅಥವಾ ಮತದಾನದ ಶೇಕಡಾವಾರು ಪ್ರಮಾಣವನ್ನು( ಫಾರ್ಮ್ 17ಸಿ), ಮತದಾರರ ಪಟ್ಟಿ ಸಮಸ್ಯೆ ಕುರಿತು ಯಾವುದೇ ದೂರು ನೀಡಿಲ್ಲ. ಈ ಕುರಿತು ಯಾವುದೇ ಪ್ರಸ್ತಾಪ ಆಗಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಸ್ವಯಂಪ್ರೇರಿತವಾಗಿ ಈ ಆರೋಪ ಮಾಡಿದ್ದಾರೆ.ಈ ಸಂಬದ್ಧ ಆರೋಪಕ್ಕೆ ಉತ್ತರವಾಗಿ ಸಂಪೂರ್ಣ ಟೇಬಲ್ ನೀಡಲಾಗಿದೆ. ಖರ್ಗೆ ಆರೋಪದಂತೆ ಕ್ರೋಢೀಕರಿಸಿದ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಇದೇ ರೀತಿ ಆರೋಪ ಮಾಡಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಹಿಂದಿನ ತಪ್ಪಗಳು ಹಾಗೂ ಮುಖಭಂಗದಿಂದ ಪಾಠ ಕಲಿಯುವ ಬದಲು ಮತ್ತದೇ ಆರೋಪ ಮಾಡಿದ್ದಾರೆ.
ಖರ್ಗೆ ಆಧಾರರಹಿತ ಆರೋಪ ಚುನಾವಣೆ ಮೇಲೆ ಅನುಮಾನ ಮೂಡಿಸುವಂತಿದೆ. ಭಾರತೀಯ ಸಂವಿಧಾನ ಹಾಗೂ ಜನರ ವಿರುದ್ಧ ಅಪಪ್ರಚಾರ ಮಾಡುವ ಯತ್ನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.