ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 6ನೇ ಹಾಗೂ ಅಂತಿಮ ಪಟ್ಟಿಯನ್ನು ಬುಧವಾರ ತಡರಾತ್ರಿ ಪ್ರಕಟ ಮಾಡಿದೆ.
ನಿನ್ನೆ(ಏಪ್ರಿಲ್ 19) 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ, ಬಳಿಕ ಮಧ್ಯ ರಾತ್ರಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಮೂಲಕ ಕಾಂಗ್ರೆಸ್ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಗಳೂರು ನಗರ ಉತ್ತರಕ್ಕೆ ಇನಾಯತ್ ಉಲ್ಲಾ ಹಾಗೂ ಸಿ.ವಿ.ರಾಮನ್ ನಗರಕ್ಕೆ ಎಸ್. ಆನಂದ್ ಕುಮಾರ್ ಅವರನ್ನು ಹುರಿಯಾಳುಯನ್ನಾಗಿ ಮಾಡಲಾಗಿದೆ.
ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಮೊಹಮ್ಮದ್ ಶಲಾಂ, ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್ ಗೌಡ ಹಾಗೂ ಅರಕಲಗೂಡು ಕ್ಷೇತ್ರಕ್ಕೆ ಎಚ್.ಪಿ. ಶ್ರೀಧರ್ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ನಿನ್ನೆ ಬಿಜೆಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿತ್ತು. ಬಳಿಕ ತೀವ್ರ ಕಗ್ಗಂಟಾಗಿ ಉಳಿದಿದ್ದ 5 ಕ್ಷೇತ್ರಗಳಿಗೆ ಕಾಂಗ್ರೆಸ್ ಬುಧವಾರ ಮಧ್ಯರಾತ್ರಿ 2 ಗಂಟೆಗೆ ಕಾಂಗ್ರೆಸ್ ಅಂತಿಮ (6ನೇ ಪಟ್ಟಿ) ಪಟ್ಟಿಯನ್ನು ಪ್ರಕಟಿಸಿದೆ.
ಮೇ 10ರಂದು ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆದಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.