ಹೊಸದಿಗಂತ ವರದಿ, ಹುಬ್ಬಳ್ಳಿ:
ದೇಶದಲ್ಲಿ ಇಬ್ಬರು ಸಿದ್ದುಗಳಿದ್ದಾರೆ. ಇವರಿಂದಲ್ಲೇ ಕಾಂಗ್ರೆಸ್ನ ಅಂತ್ಯವಾಗುತ್ತದೆ. ಈಗಾಗಲೇ ಪಂಜಾಬ್ ನ ಸಿಧು ಅವರಿಂದ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಇಲ್ಲಿರುವ ಸಿದ್ದು ಅವರಿಂದ ರಾಜ್ಯದಲ್ಲಿ ಕಾಂಗ್ರೆಸ್ ಕೊನೆಯಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹೇಳುವಂತೆ ಕಾಂಗ್ರೆಸ್ ಮುಕ್ತ ದೇಶವಾಗುತ್ತಿದೆ. ರಾಜ್ಯದಲ್ಲಿಯೂ ಸಹ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ಜಗಳದಿಂದ ಕಾಂಗ್ರೆಸ್ ನಾಶವಾಗುತ್ತದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ಕಳೆದುಕೊಂಡಿದೆ. ರಾಜ್ಯಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ: ಬಜೆಟ್ ಅಧಿವೇಶ ನಡೆಯುತ್ತಿದ್ದು, ಇದಾದ ಬಳಿಕ ಸಿಎಂ ಅವರು ವರಿಷ್ಠರ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಿಗೆ ಬಿಟ್ಟ ವಿಚಾರವಾಗಿದೆ. ಸಂಪುಟ ವಿಸ್ತರಣೆ ಅಂದರೆ ಹಲವಾರು ಬದಲಾವಣೆ ಸಹಜ. ಹಳಬರು ತೆಗೆದು ಹೊಸಬರಿಗೆ ಅವಕಾಶ ನೀಡಬಹುದು. ಆದರೆ ನನ್ನದು ಸ್ಪಷ್ಟ ನಿರ್ಧಾರ ನಾನು ಹಿಂದೆ ಹೇಳಿದಂತೆ ಸಚಿವ ಸಂಪುಟ ಸೇರುವುದಿಲ್ಲ. ಪದೇ ಪದೇ ಈ ವಿಷಯ ಕೇಳಬೇಡಿ ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ನವರನ್ನು ಯಾವತ್ತು ಕಡೆಗಣಿಸಿಲ್ಲ. ಅವರು ಮಾಡಿದ ಪಕ್ಷ ಸಂಘಟನೆ ಮತ್ತು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದರು.