ಹೊಸದಿಗಂತ ವರದಿ ಕಾರವಾರ :
ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಚೈತ್ರಾ ಕೋಠಾರಕರ್ ಅವರು ಈಗ ಟಿಕಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ನತ್ತ ಹೆಜ್ಜೆ ಇರಿಸಿದರಾ? ಹೀಗೊಂದು ವರದಿ ತೆನೆ ಪಾಳಯದಿಂದ ಬರತೊಡಗಿದೆ.
ಕಾಂಗ್ರೆಸ್ ಅಭ್ಯರ್ಥಿ ಆಗಲು ಕಾರವಾರ ಮತ್ತು ಅಂಕೋಲಾದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದ ಚೈತ್ರಾರಿಗೆ ಪಕ್ಷದ ಹೈಕಮಾಂಡ್ ಆಘಾತ ನೀಡಿದ್ದು, ಮಾಜಿ ಶಾಸಕ ಸತೀಶ ಸೈಲ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಇದರಿಂದಾಗಿ ಅತೃಪ್ತರಾಗಿದ್ದ ಚೈತ್ರಾ ಬೆಂಬಲಿಗರು ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಯುವಂತೆ ಒತ್ತಾಯಿಸಿದರು. ಇದಕ್ಕೆ ಕೋಠಾರಕರ್ ಸಹ ಆಸಕ್ತಿ ತಳೆದಿದ್ದರು.
ಈಗ ಬಂದ ವರದಿಯಂತೆ ಮಾಜಿ ಶಾಸಕ ಆನಂದ ಅಸ್ನೋಟಿಕರ್ ಜೆಡಿಎಸ್ ಅಭ್ಯರ್ಥಿ ಆಗಲು ಒಲವು ತೋರಿಸುತ್ತಿಲ್ಲ, ಅವರ ನಡೆ ನಿಗೂಢವಾಗಿದೆ. ಇತ್ತ ಜೆಡಿಎಸ್ಗೂ ಪ್ರಬಲ ಅಭ್ಯರ್ಥಿ ಇಲ್ಲ,
ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕತ್ವ ಚೈತ್ರಾರನ್ನು ಸಂಪರ್ಕಿಸಿ ಕಣಕ್ಕೆ ಇಳಿಯಲು ಮನವೊಲಿಸಿರುವ ವರದಿ ಬಂದಿದೆ.
ಈ ಬಗ್ಗೆ ಅವರನ್ನು ಸಂಪರ್ಕಿಸಿದಾಗ, ಜೆಡಿಎಸ್ ಪ್ರಮುಖರು ಸಂಪರ್ಕಿಸಿದ್ದು ನಿಜ. ಆದರೆ ನನ್ನ ಅಭಿಮಾನಿಗಳ, ಹಿತೈಷಿಗಳ ಅಭಿಪ್ರಾಯ ಪಡೆಯುತ್ತೇನೆ. ಏ. 10 ರ ನಂತರ ನನ್ನ ನಿಲುವು ಸ್ಪಷ್ಟಪಡಿಸುವೆ. ಏನೇ ಆದರೂ ಕಣಕ್ಕೆ ಇಳಿಯುವುದು ಗ್ಯಾರಂಟಿ ಎಂದಿದ್ದಾರೆ. ಈ ಮೂಲಕ ಕುತೂಹಲ ಕಾದಿರಿಸಿದ್ದಾರೆ.