ಹೊಸದಿಗಂತ ವರದಿ, ಮೈಸೂರು:
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿರುವ ಕಾರಣ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರೊಂದಿಗೆ ಜಂಟಿಯಾಗಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಇದು ಎಮ್ಮೆ ಚರ್ಮದ ಸರ್ಕಾರ, ಬಡವರ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಜನರು ಸರ್ಕಾರದ ಆಡಳಿತ ದಿಂದ ಬೇಸೆತ್ತಿದ್ದಾರೆ. ಹಾಗಾಗಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಅದೇ ರೀತಿ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಯ ಕಾಮಗಾರಿ ಆರಂಭಕ್ಕೆ ಆಗ್ರಹಿಸಿ, ಪಕ್ಷಾತೀತ ಹೋರಾಟ ನಡೆಸಲಾಗುತ್ತದೆ. ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಲಿದೆ. ಎಲ್ಲಾ ಪಕ್ಷದ ಮುಖಂಡರು, ಹಾಲಿ, ಮಾಜಿ ಶಾಸಕರು, ಎಲ್ಲಾ ಸಂಘ, ಸಂಸ್ಥೆಗಳು, ಮಠಾಧೀಶರು ಗಳಿಗೆ ಆಹ್ವಾನ ನೀಡಲಾಗಿದೆ. ಮೇಕೆದಾಟು ಯೋಜನೆಗೆ ಯಾವುದೇ ತಕರಾರು ಅಲ್ಲಿನ ಜನರು, ರೈತರಿಂದ ಇಲ್ಲ, ಕೇವಲ ಒಂದು ಗ್ರಾಮವನ್ನು ಮಾತ್ರ ಸ್ಥಳಾಂತರ ಮಾಡಬೇಕು. ಮಠವೊಂದು ಮಾತ್ರ ಮುಳುಗಡೆಯಾಗಲಿದೆ. ರಾಜ್ಯದ ಸಂಸದರು ಒಗ್ಗಟ್ಟಾಗಿ ನಿಂತು ಯೋಜನೆ ಗೆ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಕೊಡಿಸಿದರೆ ಕಾಮಗಾರಿ ಬಹಳ ವೇಗವಾಗಿ ಆಗಲಿದೆ ಎಂದು ತಿಳಿಸಿದರು.